ಬೆಂಗಳೂರು: `ರಾಜ್ಯ ಸರ್ಕಾರದ ಪಠ್ಯ ಪುಸ್ತಕ ಕೇಸರೀಕರಣಕ್ಕೆ ಸಂಬಂಧಿಸಿದಂತೆ ಫೆ. 23 ರಂದು ಬನಶಂಕರಿಯ ರಾಜ್ಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯದ ಕಚೇರಿಗೆ ಮುತ್ತಿಗೆ ಹಾಕಲಾಗುವುದು~ ಎಂದು ಶಿಕ್ಷಣ ಕೋಮುವಾದಿಕರಣ ವಿರೋಧಿ ವೇದಿಕೆಯು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿತು.
`ಕಚೇರಿ ಮುತ್ತಿಗೆಯ ನಂತರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ, ಫೆಬ್ರುವರಿ 28 ರಂದು ರಾಜ್ಯಾದ್ಯಾಂತ ಶಾಲಾ-ಕಾಲೇಜು ಬಂದ್ ನಡೆಸಲು ಕರೆ ನೀಡಲಾಗುವುದು~ ಎಂದು ವೇದಿಕೆಯ ಎನ್. ಅನಂತ್ ನಾಯ್ಕ ಎಚ್ಚರಿಸಿದರು.
`ಪಠ್ಯ ಪುಸ್ತಕಗಳ ಕರಡು ಪ್ರತಿಯನ್ನು ಈ ಕೂಡಲೇ ಹಿಂತೆಗೆದುಕೊಳ್ಳಬೇಕು. ಇದರ ನೈತಿಕ ಹೊಣೆ ಹೊತ್ತು ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು~ ಎಂದು ವೇದಿಕೆಯ ವೆಂಕಟೇಶ ಗೌಡ ಹೇಳಿದರು.
`ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ತಾನು ವಿದ್ಯಾರ್ಥಿಗಳ ಸಂಘಟನೆ. ಅನ್ಯಾಯವನ್ನು ಕಂಡು ಸಹಿಸುವುದಿಲ್ಲ ಎಂದು ಘೋಷಿಸುತ್ತದೆ. ಆದರೆ, ಸದನದಲ್ಲಿ ನಡೆದ ಬ್ಲೂ ಫಿಲಂ ಸಿಡಿಗೆ ಸಂಬಂಧಿಸಿದಂತೆ ಒಂದು ಚಕಾರವನ್ನು ಮಾತಾಡಿಲ್ಲ. ಇದು ಆ ಸಂಘಟನೆಯ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡುತ್ತದೆ~ ಎಂದರು.
ಗೋಷ್ಠಿಯಲ್ಲಿ ವೇದಿಕೆಯ ಬಿ.ರಾಜಶೇಖರಮೂರ್ತಿ, ರಾಜ ಗೋಪಾಲ್, ಅಣ್ಣೇಗೌಡ, ಸರ್ದಾರ್ ಮಹ್ಮದ್ ಖುರೇಷಿ ಮತ್ತಿತರರು ಉಪಸ್ಥಿತರಿದ್ದರು.