ಹುಬ್ಬಳ್ಳಿ:ಹೊಸ ಪಡಿತರ ಚೀಟಿಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗಾಗಿ ನಗರಗಳಲ್ಲಿ ತೆರೆದಿದ್ದ 260 ಖಾಸಗಿ ಫೋಟೋ ಬಯೋಮೆಟ್ರಿಕ್ ಸೇವಾ ಕೇಂದ್ರಗಳನ್ನು ಮುಚ್ಚಲಾಗಿದ್ದು ಇನ್ನು ಮುಂದೆ ‘ಕರ್ನಾಟಕ ಒನ್’ ಮತ್ತು ‘ಅಟಲ್ಜೀ ಜನಸ್ನೇಹಿ ಕೇಂದ್ರ’ಗಳು ಮಾತ್ರ ಈ ಕಾರ್ಯನಿರ್ವಹಿಸಲಿವೆ.
ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಗ್ರಾಹಕರಿಂದ ಬೇಕಾಬಿಟ್ಟಿ ಹಣ ವಸೂಲು ಮಾಡುತ್ತಿರುವ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಕ್ರಮ ತೆಗದುಕೊಳ್ಳಲಾಗಿದೆ’ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಆಯುಕ್ತ ಹರ್ಷ ಗುಪ್ತಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕರ್ನಾಟಕ ಒನ್’ ಕೇಂದ್ರಗಳಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮೂರು ತಿಂಗಳ ಹಿಂದೆ ಆರಂಭವಾಗಿದೆ. ಹೀಗಾಗಿ ಈ ನಗರಗಳಲ್ಲಿ ಖಾಸಗಿ ಸೇವಾ ಕೇಂದ್ರಗಳನ್ನು ರದ್ದುಪಡಿಸಲಾಗಿದೆ. ‘ಕರ್ನಾಟಕ ಒನ್’ ಇಲ್ಲದ ಕಡೆ ಮಾತ್ರ ಖಾಸಗಿ ಫೋಟೋ ಬಯೋಮೆಟ್ರಿಕ್ ಕೇಂದ್ರಗಳು ಮುಂದುವರಿಯಲಿವೆ’ ಎಂದರು.
‘ಗ್ರಾಮೀಣ ಪ್ರದೇಶಗಳಲ್ಲಿರುವ ಖಾಸಗಿ ಫೋಟೋ ಬಯೋಮೆಟ್ರಿಕ್ ಕೇಂದ್ರಗಳನ್ನೂ ಸದ್ಯದಲ್ಲೆ ಬಂದ್ ಮಾಡಲಾಗುವುದು. ಪರ್ಯಾಯವಾಗಿ ತಾಲ್ಲೂಕು ಕೇಂದ್ರಗಳಲ್ಲಿರುವ ಅಟಲ್ಜೀ ಜನಸ್ನೇಹಿ ಕೇಂದ್ರಗಳಲ್ಲಿ ಪಡಿತರ ಚೀಟಿ ಅರ್ಜಿ ಸಲ್ಲಿಕೆಗೆ ಅವಕಾಶ ಮಾಡಿಕೊಡಲಾಗುವುದು. ಇಲಾಖೆಯ ತಾಲ್ಲೂಕು ಕಚೇರಿಗಳಲ್ಲೂ ಅರ್ಜಿಗಳನ್ನು ಸ್ವೀಕರಿಸುವ ವ್ಯವಸ್ಥೆ ಆರಂಭಿಸುವ ಚಿಂತನೆ ಇದೆ’ ಎಂದು ಹೇಳಿದರು.