ಮಳವಳ್ಳಿ: ಗಂಗಾ ಪರಮೇಶ್ವರಿ ಸಹಕಾರ ಸಂಘದ ವ್ಯಾಪ್ತಿಯ 700 ಕಾರ್ಡುದಾರರಿಗೆ ಡಿಸೆಂಬರ್ ತಿಂಗಳಲ್ಲಿನ ಪಡಿತರ ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಕಾರ್ಡುದಾರರು ಶುಕ್ರವಾರ ಧರಣಿ ನಡೆಸಿದರು.
ಪ್ರತಿಭಟನಾ ಮೆರವಣಿಗೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಪಡಿತರ ವಿತರಿಸಬೇಕು ಹಾಗೂ ಸ್ಥಳಕ್ಕೆ ಆಹಾರ ಇಲಾಖೆಯ ಉಪನಿರ್ದೇಶಕರು ಆಗಮಿಸಬೇಕೆಂದು ಪಟ್ಟು ಹಿಡಿದರು.
ಹಲವು ನೆಪಗಳೊಡ್ಡಿ ಪಡಿತರ ರದ್ದುಗೊಳಿಸಲಾಗಿದೆ. ಇದರಿಂದ ಬಡವರು ತೀವ್ರ ತೊಂದರೆ ಎದುರಿಸುವಂತಾಗಿದ್ದು, ಕೂಡಲೇ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿದರು.
ಸ್ಥಳಕ್ಕೆ ಆಹಾರ ಇಲಾಖೆ ಶಿರಸ್ತೆದಾರ್ ಅವರು ಆಗಮಿಸಿ ಪಡಿತರ ವಿತರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ಧರಣಿ ಅಂತ್ಯಗೊಳಿಸಿದರು.
ಗಂಗಾ ಪರಮೇಶ್ವರಿ ಸಹಕಾರ ಸಂಘದ ಅಧ್ಯಕ್ಷ ಕಂಬರಾಜು, ಉಪಾಧ್ಯಕ್ಷ ಶಿವಕುಮಾರ್ ಹಾಗೂ ನಿರ್ದೇಶಕರು, ಪುರಸಭೆ ಮಾಜಿ ಅಧ್ಯಕ್ಷ ದೊಡ್ಡಯ್ಯ, ಕೆ.ಗಂಗಾರಾಜೇ ಅರಸು, ಮಾಜಿ ಸದಸ್ಯರಾದ ಬಸಪ್ಪ, ನಂಜುಂಡಯ್ಯ ಭಾಗವಹಿಸಿದ್ದರು.