ಕಳಂಜ(ಬೆಳ್ಳಾರೆ): ಕಳಂಜ -ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವನ್ನು ವಿಭಜಿಸಿ ಬಾಳಿಲ - ಮುಪ್ಷೇರ್ಯ ಗ್ರಾಮಗಳಿಗೆ ಪ್ರತ್ಯೇಕ ಸಹಕಾರಿ ಸಂಘ ರಚಿಸಬೇಕೆಂದು ಒತ್ತಾಯಿಸಿ ಮಂಗಳವಾರ ಕಳಂಜ ಬಾಳಿಲ ಪ್ರಾಥಮಿಕ ಪತ್ತಿನ ಕೃಷಿ ಸಹಕಾರ ಸಂಘದ ಹಿತ ರಕ್ಷಣಾ ಸಮಿತಿಯವರು ಬಾಳಿಲದಿಂದ ಕಳಂಜ ತನಕ ಬೃಹತ್ ಜಾಥಾ ನಡೆಸಿ ಕಳಂಜ - ಬಾಳಿಲ ಸಹಕಾರಿ ವ್ಯವಸಾಯ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್ ಮನ್ಮಥ ಮಾತನಾಡಿ, ಅಧ್ಯಕ್ಷರ ಮೇಲೆ ಆಪಾದನೆ ಸೃಷ್ಠಿಯಾದ ಮೇಲೆ ಮಾಹಿತಿ ಕೊಡಬೇಕು. ಆದರೆ ಇಲ್ಲಿಯ ಸಹಕಾರಿ ಬ್ಯಾಂಕ್ ಅಧ್ಯಕ್ಷರು ಪಡೆದುಕೊಂಡಿರುವ ಸಾಲದ ಕುರಿತು ಯಾವುದೇ ಮಾಹಿತಿ ದೊರೆಯುತ್ತಿಲ್ಲ. ಅಲ್ಲದೆ ಹಾಲಿ ಅಧ್ಯಕ್ಷರು ಮಾಹಿತಿ ಕೇಳಿದಕ್ಕೆ ಮಾಜಿ ಅಧ್ಯಕ್ಷರಿಗೆ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿದರು.
ಸಾಲ ಪಡೆದುಕೊಂಡ ಅಧ್ಯಕ್ಷ ಸಹಿತ ಆಡಳಿತ ಮಂಡಳಿಯ ಎಲ್ಲಾ ಸದಸ್ಯರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಬಾಳಿಲ- ಮುಪ್ಪೇರ್ಯ ಗ್ರಾಮದವರಿಗೆ ಪ್ರತ್ಯಕ ಸಹಕಾರಿ ಬ್ಯಾಂಕ್ ರಚನೆಯಾಗಲಿ. ಕಳಂಜ ಬಾಳಿಲ ಸಹಕಾರಿ ಸಂಘವನ್ನು ವಿಭಜಿಸಿ ಬಾಳಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಪ್ರತ್ಯೇಕ ಸಹಕಾರಿ ಸಂಘ ರಚಿಸುವಂತೆ ಮನವಿಯನ್ನು ಸಹಕಾರಿ ಸಂಘದ ಅಧಿಕಾರಿಗಳಗೆ ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಲ್ಲ. ಮುಂದೆ ನಮ್ಮ ಬೇಡಿಕೆಯನ್ನು ಕಡೆಗಣಿಸಿದರೆ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಗಾವುದೆಂದು ಅವರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬೆಳ್ಳಾರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ ಆಶಾ ತಿಮ್ಮಪ್ಪ, ಬಾಳಿಲ ತಾಲ್ಲೂಕು ಪಂಚಾಯಿತಿ ಕ್ಷೇತ್ರದ ಸದಸ್ಯ ಹರೀಶ್ ರೈ ದೇರಂಪಾಲು, ಅಜಿತ್ರಾವ್ ಕಿಲಂಗೋಡಿ, ನೆಟ್ಟಾರು ಗೋಪಾಲಕೃಷ್ಣ ಭಟ್, ಸಹಕಾರಿ ಭಾರತಿಯ ಜಿಲ್ಲಾ ಸಂಚಾಲಕ ಪ್ರಸನ್ನ ಮಾತನಾಡಿದರು. ಹಿತರಕ್ಷಣಾ ಸಮಿತಿ ಸದಸ್ಯರಾದ ಮುಗುಪ್ಪು ಕೂಸಪ್ಪ ಗೌಡ,ಹೊಸಮನೆ ಭಾಸ್ಕರ ರೈ,ಶ್ರೀನಾಥ್ ರೈ,ನಾರಾಯಣ ರೈ,ರಮೇಶ್ ರೈ ಪ್ರತಿಭಟನೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.