ಕಾರವಾರ: ಅಂಕೋಲಾ ತಾಲ್ಲೂಕಿನ ಬೇಲೆಕೇರಿಯ ಸೀಮಾ ಗೊಳೇಕರ್ (24) ನಾಪತ್ತೆ ಪ್ರಕರಣ ಕುಮಟಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಏಳು ತಿಂಗಳು ಸಮೀಪಸುತ್ತಿದ್ದರೂ ಆಕೆಯನ್ನೂ ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಮಗಳನ್ನು ಪತ್ತೆಹಚ್ಚಿಕೊಡಿ ಎಂದು ಈಕೆಯ ತಂದೆ ಪುತ್ತ ಗೊಳೇಕರ್ ಅವರು ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ಬಾಲಕೃಷ್ಣ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ.
ಸೀಮಾಳನ್ನು ಜೂ. 28ರಂದು ಕುಮಟಾ ಸಮೀಪದ ನಾಗೂರಿನ ನವದುರ್ಗಾ ಪರಮೇಶ್ವರಿ ನವಶಕ್ತಿ ದೇವಸ್ಥಾನದ ಅರ್ಚಕ ಮಂಜುನಾಥ ನಾಯ್ಕ ಅಪಹರಿಸಿದ್ದಾನೆ. ಆರೋಪಿಯ ಹಿನ್ನೆಲೆ ಕುರಿತು ಗ್ರಾಮದ ಸುತ್ತಮುತ್ತಲಿನ ವ್ಯಕ್ತಿಗಳಲ್ಲಿ ವಿಚಾರಣೆ ನಡೆಸಿದಾಗ ಇಂತಹ ಅಪಹರಣ ಪ್ರಕರಣಗಳು ಹಿಂದೆಯೂ ಇಲ್ಲಿ ನಡೆದಿದೆ ಎನ್ನುವುದು ತಿಳಿದು ಬಂದಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹೊನ್ನಾವರ ತಾಲ್ಲೂಕಿನ ಚೌಡಿಗದ್ದೆಯಲ್ಲಿ ಅರ್ಚಕ ನಾಯ್ಕ ಇಂತದ್ದೇ ಕೃತ್ಯ ನಡೆಸಿದ್ದರಿಂದ ಸಿಡಿದೆದ್ದ ಗ್ರಾಮಸ್ಥರು ಓಡಿಸಿದ್ದರಿಂದ ಈತ ನಾಗೂರಿಗೆ ಬಂದು ನೆಲೆಸಿದ್ದಾರೆ ಎಂದು ಸ್ಥಳೀಯ ವಾರಪತ್ರಿಕೆಯೊಂದು ವರದಿ ಮಾಡಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಅರ್ಚಕ ಮಂಜುನಾಥ ನಾಯ್ಕ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದ್ದಲ್ಲಿ ಸತ್ಯಸಂಗತಿ ಏನೂ ಎನ್ನುವುದು ತಿಳಿಯಲಿದೆ ಎಂದು ಗೊಳೇಕರ್ ಹೇಳಿದ್ದಾರೆ. ಮಗಳ ನಾಪತ್ತೆಯಿಂದ ಮಾನಸಿಕವಾಗಿ ನೊಂದಿರುವ ತಾಯಿ ಪ್ರೇಮಾ ಗೊಳೇಕರ್ ಹಾಸಿಗೆ ಹಿಡಿದಿದ್ದಾಳೆ ಎಂದು ಗೊಳೇಕರ್ ಆತಂಕ ವ್ಯಕ್ತಪಡಿಸಿದ್ದಾರೆ.