ಬೆಂಗಳೂರು: ವ್ಯಕ್ತಿಯೊಬ್ಬರನ್ನು ಅವರ ಪತ್ನಿ ಮತ್ತು ಅತ್ತೆಯೇ ಕೊಲೆ ಮಾಡಿರುವ ಘಟನೆ ಮಡಿವಾಳ ಸಮೀಪದ ಲಕ್ಷ್ಮಿಲೇಔಟ್ನಲ್ಲಿ ಭಾನುವಾರ ರಾತ್ರಿ ನಡೆದಿದೆ.
ಲಕ್ಷ್ಮಿಲೇಔಟ್ ನಿವಾಸಿ ರಾಜಪ್ಪ (35) ಕೊಲೆಯಾದವರು. ಅವರ ಪತ್ನಿ ನಂದಿನಿ (30) ಮತ್ತು ಅತ್ತೆ ಶಾರದಮ್ಮ (48) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜಪ್ಪ ಸಿದ್ಧ ಉಡುಪು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮದ್ಯವ್ಯಸನಿಯಾದ ಅವರು ಪ್ರತಿನಿತ್ಯ ಪತ್ನಿಯ ಜತೆ ಜಗಳವಾಡಿ ಕಿರುಕುಳ ನೀಡುತ್ತಿದ್ದರು. ಅವರು ರಾತ್ರಿ ಪಾನಮತ್ತರಾಗಿ ಬಂದು ಪತ್ನಿ ಮತ್ತು ಅತ್ತೆಯ ಜತೆ ಜಗಳವಾಡಿದ್ದಾರೆ. ಇದರಿಂದ ಕೋಪಗೊಂಡ ನಂದಿನಿ ಮತ್ತು ಶಾರದಮ್ಮ ಒಟ್ಟಾಗಿ ಸೇರಿ ರಾಜಪ್ಪನ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾರೆ.
ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.