ಮುಂಬೈ (ಪಿಟಿಐ): ಹಿರಿಯ ತನಿಖಾ ಪತ್ರಕರ್ತ ಜ್ಯೋತಿರ್ಮಯ್ ಡೇ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಇಬ್ಬರು ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಆರೋಪಿಗಳು ಈ ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿರುವ ಮುಂಬೈನ ಅಪರಾಧ ವಿಭಾಗದ ಪೊಲೀಸರಿಗೆ ತಿಳಿಸಿದ್ದಾರೆ. ಅದನ್ನು ದಾಖಲು ಮಾಡಿಕೊಳ್ಳಲಾಗಿದೆ.
ಡೇ ಅವರನ್ನು ಹತ್ಯೆ ಮಾಡಿದವರಿಗೆ ಜಾಗತಿಕವಾಗಿ ಸಂವಹನ ಮಾಡಬಹುದಾದ ಸಿಮ್ ಕಾರ್ಡ್ಗಳನ್ನು ಒದಗಿಸಿಕೊಟ್ಟಿದ್ದ ಆರೋಪಿ ಪಾಲ್ಸನ್ ಜೋಸೆಫ್ ಮತ್ತು ಅಮೆರಿಕ ತಯಾರಿಕೆಯಾದ 32 ಎಂ.ಎಂ. ರಿವಾಲ್ವರ್ ಅನ್ನು ಒದಗಿಸಿಕೊಟ್ಟ ಆರೋಪ ಎದುರಿಸುತ್ತಿರುವ ದೀಪಕ್ ಸಿಸೋಡಿಯಾ ಈ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.
ಭೂಗತ ಪಾತಕಿ ಚೋಟಾ ರಾಜನ್ ಸಹಚರ ಸತೀಶ್ ಕಲ್ಯಾಣಿಗೆ ಸಿಸೋಡಿಯಾ ಈ ರಿವಾಲ್ವರ್ ನೀಡಿದ್ದರು ಎಂದು ಆಪಾದಿಸಲಾಗಿದೆ.
`ಸಿಸೋಡಿಯಾ ಹೇಳಿಕೆಯನ್ನು ಸೆ. 7ರಂದು ಮತ್ತು ಜೋಸೆಫ್ ಹೇಳಿಕೆಯನ್ನು ಸೆ. 13ರಂದು ದಾಖಲಿಸಿಕೊಳ್ಳಲಾಗಿದೆ~ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
`ಆರೋಪ ಪಟ್ಟಿ ಸಲ್ಲಿಕೆಗೆ ಎರಡು ತಿಂಗಳು ಕಾಲಾವಕಾಶ ನೀಡಬೇಕು ಎಂದು ನ್ಯಾಯಾಲಯವನ್ನು ಕೋರಲಾಗಿದೆ. ಅಷ್ಟರಲ್ಲಿ ಸಾಕ್ಷ್ಯಾಧಾರಗಳನ್ನು ಕಲೆಹಾಕಲಾಗುವುದು~ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಪ್ರಕರಣದ ಮತ್ತೊಬ್ಬ ಆರೋಪಿ ಅನಿಲ್ ವಾಘ್ಮೊಡೆ ಪೊಲೀಸರು ವಶ ಪಡಿಸಿಕೊಂಡಿರುವ ತಮ್ಮ ಕಾರ್ ಅನ್ನು ವಾಪಸು ಕೊಡಿಸಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ವಾಘ್ಮೊಡೆ ಅವರ ಕಾರನ್ನು ಈ ಪ್ರಕರಣದಲ್ಲಿ ಭಾಗಿಯಾದ ಸಹಆರೋಪಿಗಳು ಬಳಕೆ ಮಾಡಿಕೊಂಡ್ದ್ದಿದಾರೆಂಬ ಆರೋಪದ ಮೇಲೆ ಪೊಲೀಸರು ಅದನ್ನು ವಶ ಪಡಿಸಿಕೊಂಡಿದ್ದಾರೆ.