ಹುಬ್ಬಳ್ಳಿ: ಹೊಸ ವರ್ಷಾಚರಣೆ ಸಂದರ್ಭ ಹನ್ಸ್ ಹೋಟೆಲ್ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರ ದಾಳಿಯನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವುದನ್ನು ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಖಂಡಿಸಿದೆ. ‘ಖಾಸಗಿ ಸುದ್ದಿ ವಾಹಿನಿಯ ಕ್ಯಾಮೆರಾಮನ್ ಮೇಲೆ ಹಲ್ಲೆ ನಡೆಸಿ, ಕ್ಯಾಮೆರಾವನ್ನು ಜಖಂಗೊಳಿಸಲಾಗಿದೆ.
ಈ ಘಟನೆಯಲ್ಲಿ ಹೋಟೆಲ್ನ ಸಿಬ್ಬಂದಿ ಜೊತೆಗೆ ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗಿರೀಶ ರೋಡ್ಕರ್ ಸಹ ಭಾಗಿಯಾಗಿದ್ದಾರೆ. ಮಾಧ್ಯಮದವರ ಮೇಲೆ ಹಲ್ಲೆ ನಡೆಸಲು ಪ್ರೇರೇಪಿಸಿದ ಇನ್ಸ್ಪೆಕ್ಟರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಪತ್ರಕರ್ತರಿಗೆ ರಕ್ಷಣೆ ಒದಗಿಸಬೇಕು’ ಎಂದು ಸಂಘದ ಅಧ್ಯಕ್ಷ ಮಂಜುನಾಥ ಭಟ್ ಪೊಲೀಸ್ ಕಮಿಷನರ್ ಅವರನ್ನು ಒತ್ತಾಯಿಸಿದ್ದಾರೆ.
ಧಾರವಾಡ: ಹೊಸ ವರ್ಷದ ಸಂಭ್ರಮಾಚರಣೆಯ ದೃಶ್ಯಗಳನ್ನು ಸೆರೆಹಿಡಿಯಲು ಹುಬ್ಬಳ್ಳಿಯ ಹೋಟೆಲೊಂದಕ್ಕೆ ಹೋಗಿದ್ದ ಖಾಸಗಿ ಚಾನೆಲ್ನ ಕ್ಯಾಮೆರಾಮನ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿರುವ ಧಾರವಾಡದ ಪತ್ರಕರ್ತರು, ತಪ್ಪಿತಸ್ಥ ಹೋಟೆಲ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಕ್ಯಾಮೆರಾಮನ್ ಮೇಲೆ ಹೋಟೆಲ್ ಮಾಲೀಕರು ಸೇರಿದಂತೆ ಸಿಬ್ಬಂದಿ ಹಲ್ಲೆ ಮಾಡಿದ್ದು, ಲಕ್ಷಾಂತರ ಮೌಲ್ಯದ ಕ್ಯಾಮೆರಾ ಜಖಂಗೊಳಿಸಿದ್ದಾರೆ. ಮಾಧ್ಯ-ಮದ ಮೇಲೆ ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದು, ಕೂಡಲೇ ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕೆಂದು ಪತ್ರಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
‘ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡಬೇಕು. ಹಲ್ಲೆಗೊಳಗಾದ ಕ್ಯಾಮೆರಾಮನ್ಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ಜಿಲ್ಲಾಡಳಿತ ಹೋಟೆಲ್ ಮಾಲೀಕರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೂಳ್ಳಬೇಕೆಂದು’ ಆಗ್ರಹಿಸಿದರು. ಪತ್ರಕರ್ತರಾದ ರಾಜೇಂದ್ರ ಪಾಟೀಲ, ಸುರೇಶ ಜಾಡರ, ವೆಂಕನಗೌಡ ಪಾಟೀಲ, ಮಂಜುನಾಥ ಅಂಗಡಿ, ಬಸವರಾಜ ಹಿರೇಮಠ, ಮುಸ್ತಫಾ ಕುನ್ನಿಭಾವಿ. ಜಾವೇದ ಅಧೋನಿ, ರವೀಶ ಪವಾರ, ಸಂತೋಷ, ಸುಭಾನಿ ಹುಕ್ಕೇರಿ, ಆರ್.ಕೆ. ಕುಲಕರ್ಣಿ, ರವಿ ಉಳ್ಳಾಗಡ್ಡಿ, ಪ್ರಕಾಶ ಹೆಬ್ಬಳ್ಳಿ, ಪ್ರಶಾಂತ ದಿನ್ನಿ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.