ಕುಶಾಲನಗರ: ಪತ್ರಕರ್ತರು ಸಾಮಾಜಿಕ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ಸಲಹೆ ನೀಡಿದರು.
ಸೋಮವಾರಪೇಟೆ ತಾಲ್ಲೂಕು ಕಾರ್ಯನಿತರ ಪತ್ರಕರ್ತರ ಸಂಘ ಮತ್ತು ಕಾವೇರಿ ಸುದ್ದಿ ಸೆಂಟರ್ ಸಂಯುಕ್ತಾಶ್ರಯದಲ್ಲಿ ಭಾನುವಾರ ಕಾವೇರಿ ನಿಸರ್ಗಧಾಮದಲ್ಲಿ ಪತ್ರಕರ್ತರು ಮತ್ತು ಹವ್ಯಾಸಿ ಛಾಯಾಗ್ರಾಹಕರಿಗೆ ಏರ್ಪಡಿಸಿದ್ದ ತರಬೇತಿ ಮತ್ತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಕುಶಾಲನಗರ ಸಿಪಿಐ ಪಿ. ಬಸವರಾಜು ಮಾತನಾಡಿ, ಸಮಾಜದಲ್ಲಿ ಪೊಲೀಸ್ ಮತ್ತು ಪತ್ರಕರ್ತರು ಸ್ನೇಹ ಜೀವಿಗಳು. ಪರಸ್ಪರ ಸಹಕಾರದಿಂದ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಮಾತನಾಡಿದರು.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸೈಯದ್ ಇರ್ಪಾನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ರವಿ ಸುಬ್ಬಯ್ಯ, ಕೊಡಗು ಪ್ರೆಸ್ಕ್ಲಬ್ ಅಧ್ಯಕ್ಷ ಎಚ್.ಟಿ.ಅನಿಲ್, ಕಾವೇರಿ ಸುದ್ದಿ ಸೆಂಟರ್ನ ವನಿತಾ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭ ರಾಷ್ಟ್ರ ಪ್ರಶಸ್ತಿ ಪಡೆದ ಛಾಯಾಗ್ರಹಕ ನಾಗೇಶ್ ಪಾಣತ್ತಲೆ, ರಾಜ್ಯ ಪತ್ರಕರ್ತರ ಸಂಘದ ನಿರ್ದೇಶಕರಾದ ಎಸ್.ಎ.ಮುರುಳೀಧರ್ ಎಸ್.ಮಹೇಶ್ ಹಾಗೂ ಎಂಎಸ್ಸಿ ರ್ಯಾಂಕ್ ವಿಜೇತೆ ಕಣಿವೆಯ ಎಚ್.ಎಸ್.ಮೋಹಿತ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಪತ್ರಕರ್ತರಾಗಿದ್ದ ದಿ.ಸುನೀಲ್ ಅವರ ಪತ್ನಿಗೆ ಸಹಾಯಧನ ವಿತರಿಸಲಾಯಿತು. ಛಾಯಾಗ್ರಹಕ ಗುಡ್ಡೆಮನೆ ವಿಶ್ವಕುಮಾರ್ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದರು. ಸಿಂಚನಾ ಪ್ರಾರ್ಥಿಸಿದರು. ಕೆ.ಸಿ.ದಿನೇಶ್ ಸ್ವಾಗತಿಸಿದರು. ಕವನ ಕಾರ್ಯಪ್ಪ ನಿರೂಪಿಸಿದರು. ಲೋಕೇಶ್ ಸಾಗರ್ ವಂದಿಸಿದರು.