ಬೆಂಗಳೂರು: `ಪದವಿ ಪಡೆದ ಬಳಿಕವೇ ವಿದ್ಯಾರ್ಥಿಗಳ ನೈಜ ಅಧ್ಯಯನ ಆರಂಭವಾಗುವುದು. ಕೌಶಲ ವೃದ್ಧಿ, ತಾಂತ್ರಿಕ ಬೆಳವಣಿಗೆಗಳ ಕುರಿತು ಅರಿವು, ಪ್ರತಿಕೂಲ ಸನ್ನಿವೇಶದಲ್ಲಿ ಕೆಲಸ ಮಾಡುವ ಎದೆಗಾರಿಕೆ ಮತ್ತು ಸುತ್ತಲಿನ ಆಗು-ಹೋಗುಗಳ ಮೇಲೆ ನಿಗಾ ಇಡುವ ಮನೋಭಾವ ಬೆಳೆಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ' ಎಂದು ಖ್ಯಾತ ವಿಜ್ಞಾನಿ ಎಸ್.ಅನಂತನಾರಾಯಣ ಹೇಳಿದರು.
ಎಂ.ಎಸ್. ರಾಮಯ್ಯ ಸ್ಕೂಲ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಸಂಸ್ಥೆಯ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
`ಸ್ವಾತಂತ್ರ್ಯ ಸಿಕ್ಕ ಆರಂಭದಲ್ಲೇ ಕೃಷಿ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೂ ಮಹತ್ವ ನೀಡುತ್ತಾ ಬರಲಾಗಿದೆ. ದೇಶದ ಪ್ರಗತಿಯಲ್ಲಿ ಈ ಮೂರು ಕ್ಷೇತ್ರಗಳ ಪಾತ್ರ ಮಹತ್ವದ್ದಾಗಿದೆ' ಎಂದು ತಿಳಿಸಿದರು.
`ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಮಾಡಿದ ಸಾಧನೆ ಇಡೀ ಜಗತ್ತಿಗೆ ಗೊತ್ತಿದೆ. ಅಣು ವಿಜ್ಞಾನ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಹಲವು ಅವಕಾಶಗಳಿದ್ದು, ಯುವಕರು ಅತ್ತ ಗಮನಹರಿಸಬೇಕು' ಎಂದರು.
ಇಂಗ್ಲೆಂಡ್ನ ಕಾವೆಂಟ್ರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಡೆವಿಡ್ ಪಿಲ್ಸ್ಬರಿ, `ನಮ್ಮ ಸಾಮರ್ಥ್ಯದ ಮೇಲೆ ನಾವು ವಿಶ್ವಾಸ ಇಟ್ಟು ಕೆಲಸ ಮಾಡಿದರೆ ಎಂತಹ ಸವಾಲುಗಳನ್ನೂ ಎದುರಿಸಬಹುದು' ಎಂದರು.
ಗೋಕುಲ ಶಿಕ್ಷಣ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಡಿ.ವಿ. ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. `ಎಂ.ಎಸ್. ರಾಮಯ್ಯ ಶಿಕ್ಷಣ ಸಂಸ್ಥೆಗಳನ್ನೆಲ್ಲ ಒಂದುಗೂಡಿಸಿ ಶೀಘ್ರವೇ ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯ ತೆರೆಯಲಾಗುತ್ತದೆ. ನೂತನ ವಿ.ವಿಯಲ್ಲಿ ಸಂಶೋಧನೆಗೆ ಒತ್ತು ನೀಡಲಾಗುತ್ತದೆ' ಎಂದರು.
ಒಟ್ಟಾರೆ 300 ವಿದ್ಯಾರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಯಿತು. 17 ಜನ ಸ್ವರ್ಣ ಪದಕ ಬಾಚಿಕೊಂಡರು.
ಗೋಕುಲ ಶಿಕ್ಷಣ ಪ್ರತಿಷ್ಠಾನದ ನಿರ್ದೇಶಕ ಡಾ.ಎಸ್.ಆರ್. ಶಂಕಪಾಲ್, ಡಾ. ಆರ್. ಅಬ್ದುಲ್ ಗಯೇದ್ ವೇದಿಕೆ ಮೇಲೆ ಹಾಜರಿದ್ದರು.