ನವದೆಹಲಿ (ಐಎಎನ್ಎಸ್): ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ `ಬಿ~ ನೆಲಮಾಳಿಗೆಯನ್ನು ತೆರೆಯಬಾರದು, ಈಗಾಗಲೇ ಶೋಧಿಸಿರುವ ಅಮೂಲ್ಯ ವಸ್ತುಗಳ ಭಾವಚಿತ್ರ ತೆಗೆಯಬಾರದು ಹಾಗೂ ವಿಡಿಯೊ ಚಿತ್ರೀಕರಣ ಮಾಡಬಾರದು ಎಂದು ತಿರುವಾಂಕೂರು ರಾಜಮನೆತನವು ಶುಕ್ರವಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಮನವಿಯಲ್ಲಿ ಕೋರಿದೆ.
`ಬಿ~ ನೆಲಮಾಳಿಗೆ ತೆರೆಯುವುದು ದೇವಸ್ಥಾನದ ಸಂಪ್ರದಾಯ, ಆಚರಣೆ ಹಾಗೂ ಭಕ್ತರ ಭಾವನೆಗಳಿಗೆ ವಿರುದ್ಧವಾದುದು~ ಎಂದು ನ್ಯಾಯಮೂರ್ತಿಗಳಾದ ಆರ್.ವಿ.ರವೀಂದ್ರನ್ ಹಾಗೂ ಎ.ಕೆ.ಪಟ್ನಾಯಕ್ ಅವರನ್ನೊಳಗೊಂಡ ಪೀಠಕ್ಕೆ ಸಲ್ಲಿಸಿದ ಮನವಿಯಲ್ಲಿ ಹೇಳಲಾಗಿದೆ.
ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿಯು ಬಿ~ ನೆಲಮಾಳಿಗೆಯನ್ನು ತೆರೆಯಬೇಕೋ, ಬೇಡವೋ ಎನ್ನುವ ನಿರ್ಧಾರವನ್ನು ದೇವಸ್ಥಾನದ ಪ್ರಧಾನ ಅರ್ಚಕರಿಗೆ ಬಿಟ್ಟಿರುವುದಕ್ಕೆ ಕೋರ್ಟ್ ಅಚ್ಚರಿ ವ್ಯಕ್ತಪಡಿಸಿದೆ. ಈ ನಡುವೆ ದೇವಸ್ಥಾನದ ಸಂಪತ್ತಿನ ಕುರಿತು ಸ್ಥಳೀಯ ಕೋರ್ಟ್ ಆಯುಕ್ತರ ವರದಿಯನ್ನು ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿದೆ. ಇದೇ 12ರಂದು ಕೋರ್ಟ್ ಈ ಸಂಬಂಧದ ವಿಚಾರಣೆ ಕೈಗೆತ್ತಿಕೊಳ್ಳಲಿದೆ.