ಗಂಗಾವತಿ: ಯುವ ಜನಾಂಗ ಮತ್ತು ಪರಂಪರೆಯ ನಡುವಿನ ಕೊಂಡಿ ಕಳಚುತ್ತಿದ್ದು, ಯುವಜನತೆ ಇತಿಹಾಸದಿಂದ ದೂರವಾಗುವ ಸನ್ನಿವೇಶ ನಿರ್ಮಾಣವಾಗುತ್ತಿದೆ ಎಂದು ಇತಿಹಾಸಕಾರ ಮತ್ತು ಸಂಶೋಧಕ ಶರಣಬಸಪ್ಪ ಕೋಲ್ಕಾರ ಕಳವಳ ವ್ಯಕ್ತಪಡಿಸಿದರು.
ಸಾವಿರ ವರ್ಷಗಳ ಇತಿಹಾಸ ಇರುವ ಬಸವಣ್ಣ ದೇವಸ್ಥಾನದಲ್ಲಿ ಶುಕ್ರವಾರ ಎಸ್ಕೆಎನ್ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪರಂಪರಾ ಕೂಟ (ಹೆರಿಟೇಜ್ ಕ್ಲಬ್) ಹಮ್ಮಿಕೊಂಡಿದ್ದ ಸ್ಮಾರಕ ಸ್ವಚ್ಛತೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ನಮ್ಮದೇ ಆದ ಭವ್ಯ ಇತಿಹಾಸ, ಪರಂಪರೆ, ಸಂಸ್ಕೃತಿ, ಕಲೆ ಇವೆ. ಆದರೆ ಇವೆಲ್ಲವನ್ನೂ ನಿರ್ಲಕ್ಷಿಸಿ, ಯುವಜನಾಂಗ ಬಾಹ್ಯ ಪರಂಪರೆ ಅನುಕರಿಸಲು, ಪಾಶ್ಚಾತ್ಯ ಸಂಸ್ಕೃತಿ ಅಪ್ಪಿಕೊಳ್ಳಲು ಮುಂದಾಗಿರುವುದು ದುರಂತ” ಎಂದರು. ನಮ್ಮ ಪೂರ್ವಜರಿಗೆ ಸಾಕಷ್ಟು ಪೂರಕ ನಾಗರಿಕ ಸವಲತ್ತುಗಳಿರಲಿಲ್ಲ. ಆದರೆ ಎಷ್ಟೋ ಸುಂದರವಾಗಿ ಬದುಕಿ ಬಾಳಿ ಉನ್ನತ ಸಂಸ್ಕೃತಿ ಬಿಟ್ಟು ಹೋಗಿದ್ದಾರೆ. ನಮಗೆ ಈಗ ಸಾಕಷ್ಟು ಸೌಲಭ್ಯ ಇದ್ದಾಗಲೂ ಏನೋ ಕೊರತೆ ಕಾಡುತ್ತಿದೆ. ಕೌಟಂಬಿಕ, ಮಾನವೀಯ ಸಂಬಂಧಕ್ಕೆ ಬೆಲೆ ಇಲ್ಲದಂತಾಗಿದೆ. ಜೀವನ ಯಾಂತ್ರಿಕವಾಗಿದೆ” ಎಂದರು.
ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆಯ ಸ್ಮಾರಕಗಳ ಸಹಾಯಕ ಸಂರಕ್ಷಣಾಧಿಕಾರಿ ಸುಂದರ ವಡಿವೇಲು ಮಾತನಾಡಿ, ಈ ಬಸವಣ್ಣ ದೇವಸ್ಥಾನ ಸಂರಕ್ಷಿತ ಸ್ಮಾರಕದ ಪಟ್ಟಿಯಲ್ಲಿ ಇಲ್ಲ. ಆದರೂ ಪ್ರಸ್ತಾವನೆ ಸಲ್ಲಿಸಿ ಸ್ಮಾರಕದ ಸಂರಕ್ಷಣೆಗೆ ಯತ್ನಿಸುವುದಾಗಿ ಭರವಸೆ ನೀಡಿದರು. ಕಮಲಾಪುರ ಪ್ರಾಚ್ಯವಸ್ತು ಮತ್ತು ಸಂಗ್ರಾಲಯದ ಅಧೀಕ್ಷಕ ಶ್ರೀನಿವಾಸ ಮೂರ್ತಿ, ಪ್ರಾಚಾರ್ಯ ವೆಂಕಟರಮಣ ರೆಡ್ಡಿ, ಉಪನ್ಯಾಸಕರಾದ ಕೆ. ಭಜರಂಗಬಲಿ, ಜಾಜಿ ದೇವೇಂದ್ರಪ್ಪ ಇದ್ದರು.