ಬೆಳ್ತಂಗಡಿ: ಸಾಹಿತ್ಯ ಕ್ಷೇತ್ರದಲ್ಲಿಯೂ ನಮ್ಮ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಕಡೆಗಣಿಸದೆ ಪರಂಪರೆಯ ಸತ್ವದೊಂದಿಗೆ ಆಧುನಿಕ ಸವಾಲುಗಳನ್ನು ಎದುರಿಸಬೇಕು ಎಂದು ಖ್ಯಾತ ಲೇಖಕ ಸುಬ್ರಾಯ ಚೊಕ್ಕಾಡಿ ಹೇಳಿದರು.
ಯುಜಿಸಿ ಪ್ರಾಯೋಜಕತ್ವದಲ್ಲಿ ಉಜಿರೆಯಲ್ಲಿ ಎಸ್ಡಿಎಂ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ಸಿದ್ಧವನ ಗುರುಕುಲದಲ್ಲಿ ಏರ್ಪಡಿಸಲಾದ `ಪರಂಪರೆ ಮತ್ತು ಕವಿ ಪ್ರತಿಭೆಯ ಮುಖಾಮುಖಿ~ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರಂಪರೆಯ ಸೊಗಡಿನೊಂದಿಗೆ ಆಧುನಿಕತೆಯ ಸ್ಪರ್ಶವಿದ್ದಾಗ ಮಾತ್ರ ಮೌಲಿಕ ಸಾಹಿತ್ಯ ಕೃತಿ ರಚಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಬಿ.ಯಶೋವರ್ಮ ಮಾತನಾಡಿ, ಸಾಹಿತ್ಯ ನಿಂತ ನೀರಾಗದೆ ನಿರಂತರ ಬದಲಾವಣೆಯೊಂದಿಗೆ ಹೊಸತನ ಮೂಡಿ ಬರಬೇಕು. ಹಿಂದಿನ ಮೌಲಿಕ ಕೃತಿಗಳ ಅಧ್ಯಯನ ಮಾಡಿದಾಗ ಮಾತ್ರ ಹೊಸತನ ಮೂಡಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಬಿ.ಪಿ. ಸಂಪತ್ ಕುಮಾರ್, ಕೆ.ವಿ. ನಾಗರಾಜಪ್ಪ ಮತ್ತು ರಾಜಶೇಖರ ಹಳೆಮನೆ, ಮಂಗಳೂರಿನ ಸತ್ಯನಾರಾಯಣ ಮಲ್ಲಿಪಟ್ಟಣ, ಹೊಸಕೋಟೆಯ ಚಂದ್ರಶೇಖರ ನಂಗಲಿ, ಬೆಂಗಳೂರಿನ ಎಸ್.ಆರ್. ವಿಜಯಶಂಕರ ಮತ್ತು ಆಶಾದೇವಿ ಇದ್ದರು.