ನವದೆಹಲಿ (ಪಿಟಿಐ): ನಿಜವಾದ ಧರ್ಮ ದ್ವೇಷ ಮತ್ತು ಮತಭೇದದ ತಳಹದಿ ಮೇಲಿರಲು ಸಾಧ್ಯವಿಲ್ಲ. ಎಲ್ಲ ಧರ್ಮಗಳ ಶ್ರದ್ಧೆ, ನಂಬಿಕೆಗಳನ್ನು ಪರಸ್ಪರ ಗೌರವಿಸುವಂತಹ ಸಹಿಷ್ಣತೆಯನ್ನು ಬೆಳೆಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಭಾನುವಾರ ಹೇಳಿದರು.
ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು `ವಿವೇಕಾನಂದರ ವಿಚಾರಗಳನ್ನು, ಬೋಧನೆಗಳನ್ನು ನಾವು ಗೌರವಿಸಿ ಅವುಗಳನ್ನು ಮೈಗೂಡಿಸಿಕೊಳ್ಳದಿದ್ದರೆ ಅವರ ಜನ್ಮದಿನಾಚರಣೆ ಆಚರಣೆಗೆ ಅರ್ಥವಿಲ್ಲ' ಎಂದು ಹೇಳಿದರು.
`ನಿಜವಾದ ಧರ್ಮ ಮತ್ತು ಧಾರ್ಮಿಕತೆಯು ದ್ವೇಷ ಹಾಗೂ ಮತಭೇದದ ಆಧಾರದಲ್ಲಿರುವುದು ಸಾಧ್ಯವಿಲ್ಲ. ಆದ್ದರಿಂದ ಎಲ್ಲರ ಶ್ರದ್ಧೆ ಮತ್ತು ನಂಬಿಕೆಗಳನ್ನು ಪರಸ್ಪರ ಗೌರವಿಸುವ ಮತ್ತು ಸೈರಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು ಎಂಬ ನಮ್ಮ ದೇಶ ಮತ್ತು ಉಪಖಂಡಕ್ಕೆ ಪ್ರಸ್ತುತವಾಗಿ ಸಲ್ಲುವಂತಹ ಉದಾತ್ತ ಸಂದೇಶಗಳನ್ನು ವಿವೇಕಾನಂದರು ನೀಡಿದ್ದಾರೆ' ಎಂದು ಸಿಂಗ್ ತಿಳಿಸಿದರು.