ಚಿಕ್ಕೋಡಿ: ಪರಮಾತ್ಮರಾಜ್ ಮಹಾರಾಜರು ಬರೆದ ಪರಮಾಬ್ದಿ ಗ್ರಂಥದ ಮಹತ್ವ ಮತ್ತು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಸುಕ್ಷೇತ್ರ ಆಡಿ ಗ್ರಾಮದ ಗುಡ್ಡದಲ್ಲಿರುವ ದತ್ತ ದೇವ ಸ್ಥಾನದಲ್ಲಿ ದತ್ತ ಜಯಂತಿ ಪ್ರಯುಕ್ತ ಪರಮಾಬ್ದಿ ಪ್ರಸಾರ ಮಹೋತ್ಸವ ಇದೇ ಬುಧವಾರ ಆರಂಭವಾಗಿದ್ದು, 27ರವರೆಗೆ ನಡೆಯಲಿದೆ.
ಮಹೋತ್ಸವ ಪ್ರಯುಕ್ತ 26ರಂದು ಸಂಜೆ 7ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ತ್ರಿಪುರಾ ರಾಜ್ಯಪಾಲ ಪದ್ಮಶ್ರಿ ಡಾ.ಡಿ.ವೈ.ಪಾಟೀಲ, ಕೊಲ್ಲಾಪುರದ ಸಂಸದ ಸದಾಶಿವರಾವ್ ಮಹಾಡಿಕ್, ಮಹಾರಾಷ್ಟ್ರದ ಕಾರ್ಮಿಕ ಸಚಿವ ಹಸನ ಮುಶ್ರಿಫ್, ಮಹಾರಾಷ್ಟ್ರದ ಗೃಹ ಖಾತೆ ರಾಜ್ಯ ಸಚಿವ ಸತೇಜ್ ಉರ್ಫ್ ಬಂಟಿ ಪಾಟೀಲ, ಮಾಜಿ ಸಚಿವ ಪ್ರಕಾಶ ಆವಾಡೆ, ವಿಧಾನ ಪರಿಷತ್ ಸದಸ್ಯ ವೀರಕುಮಾರ ಪಾಟೀಲ, ಮಾಜಿ ಸಚಿವ ಭರಮು ಅಣ್ಣಾ ಪಾಟೀಲ, ಶಾಸಕ ಕಾಕಾಸಾಹೇಬ ಪಾಟೀಲ, ಮಾಜಿ ಶಾಸಕ ಸುಭಾಷ ಜೋಶಿ, ಭಜರಂಗ ದೇಸಾಯಿ, ಸಂಜಯ ಪಾಟೀಲ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ಮಹೋತ್ಸವದಲ್ಲಿ ಹೃಷಿಕೇಶದ ವಿಷ್ಣುಚೈತನ್ಯಜಿ ಮಹಾರಾಜ, ಶೇಂದ್ರಬ್ಶೆರಿಯ ಮೃತ್ಯುಂಜಯ ಸ್ವಾಮೀಜಿ, ಆಸುರ್ಲೇಪಾರ್ಲೆಯ ಆನಂದಸಿದ್ದ ಮಹಾರಾಜ ಮತ್ತು ಬಾಬುರಾವ ಮಹಾರಾಜ ನೇಜಕರ ಮುಂತಾದ ಪೂಜ್ಯರ ಸಾನಿಧ್ಯ ಲಭಿಸಲಿದೆ.
ಪ್ರತಿದಿನ ನಸುಕಿನ ಜಾವ 5 ರಿಂದ 6ರವರೆಗೆ ಕಾಕಡಾರತಿ, ಬೆಳಿಗ್ಗೆ 6 ರಿಂದ 7-30ರವರೆಗೆ ನಿತ್ಯಾರತಿ ಮತ್ತು ನಾಮಸ್ಮರಣೆ, 7-30 ರಿಂದ ಮಧ್ಯಾಹ್ನ 12 ರವರೆಗೆ ಪರಮಾಬ್ದಿ ಮತ್ತು ಗುರು ಚರಿತ್ರೆ ಪಠಣ, 12 ರಿಂದ 1ರವರೆಗೆ ನಿತ್ಯಾರತಿ, ನಿತ್ಯ ಪ್ರಸಾದ, 1ರಿಂದ 4-30 ರವರೆಗೆ ಮಾನಸಿಕ ಜಪ, ಸಂಜೆ 4-30ರಿಂದ 5-30ರವರೆಗೆ ಹರಿಪಾಠ, 5-30ರಿಂದ 7-30ರವರೆಗೆ ನಿತ್ಯಾರತಿ, ಸ್ತುತಿ ಪಾಠ ಮತ್ತು ಭಜನಾ ಕಾರ್ಯಕ್ರಮ, ರಾತ್ರಿ 7-30ರಿಂದ 9-30ರವರೆಗೆ ವಿವಿಧ ಪೂಜ್ಯರಿಂದ ಪ್ರವಚನ ಕಾರ್ಯಕ್ರಮ ಕಾರ್ಯಕ್ರಮ, ನಂತರ ಪ್ರಸಾದ ಮತ್ತು ಭಜನಾ ಕಾರ್ಯಕ್ರಮ ಜರುಗಲಿವೆ.
27 ರಂದು ಮಧ್ಯಾಹ್ನ ದತ್ತ ಜಯಂತಿ ಪ್ರಯುಕ್ತ ದತ್ತ ಜನ್ಮಾಧ್ಯಾಯ ಪಠಣದಂತಹ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. 19 ರಂದು ರಾತ್ರಿ 8 ರಿಂದ ಇಚಲಕರಂಜಿಯ ಬಾಳಾಸಾಹೇಬ ಮಹಾರಾಜರಿಂದ ಪ್ರವಚನ ನಡೆಯಲಿದೆ. ಕೊಲ್ಲಾಪೂರದ ಮಾಜಿ ಶಾಸಕ ಮಾಲೋಜಿರಾಜೇ ಛತ್ರಪತಿ ಮತ್ತು ಮಧುರಿ ಮಾಹಾರಾಜೇ ಛತ್ರಪತಿ ಅವರು ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ದತ್ತ ಜಯಂತಿ ಮಹೋತ್ಸವ ಕಮಿಟಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.