ನವದೆಹಲಿ (ಪಿಟಿಐ): ಭಾರತ-ಚೀನಾ ಬಾಂಧವ್ಯವು ‘ಉನ್ನತ ಪರಿಪಕ್ವತೆಯ ಹಂತ’ ತಲುಪಿರುವುದಾಗಿ ಪ್ರತಿಕ್ರಿಯಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಎರಡೂ ದೇಶಗಳು ಪರಸ್ಪರ ಅಭಿವೃದ್ಧಿ ಬಯಸಿದ್ದು ಪ್ರಾಂತ್ಯದ ಸಾಮಾನ್ಯ ಒಳಿತಿಗಾಗಿ ಬಾಂಧವ್ಯ ವೃದ್ಧಿಯಂಥ ಪ್ರಾಮಾಣಿಕ ಕಾರ್ಯದಲ್ಲಿ ತೊಡಗಬೇಕಿದೆ ಎಂದು ತಿಳಿಸಿದ್ದಾರೆ.
ಚೀನಾ ಪ್ರಧಾನಿ ವೆನ್ ಜಿಯಾಬೊ ಗೌರವಾರ್ಥ ಗುರುವಾರ ರಾತ್ರಿ ಇಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಅವರು, “ಉಭಯತ್ರರು ಎರಡೂವರೆ ಶತಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದ್ದು ಒಂದೇ ಧ್ವನಿಯಲ್ಲಿ ಮಾತನಾಡುತ್ತಿರುವುದನ್ನು ಇಡೀ ವಿಶ್ವ ಗಮನಿಸುತ್ತಿದೆ” ಎಂದು ನುಡಿದರು.
“ವೆನ್ ಭಾರತದ ಸ್ನೇಹಿತನೆಂದು ಬಣ್ಣಿಸಿದ ಅವರು 2005ರಲ್ಲಿ ಆರಂಭವಾದ ಭಾರತ-ಚೀನಾ ತಂತ್ರಕೌಶಲ್ಯ ಮತ್ತು ಸಹಕಾರ ಪಾಲುದಾರಿಕೆಯ ನಿರ್ಮಾತೃ ಹಾಗೂ ಕಳೆದ ಐದು ವರ್ಷಗಳಲ್ಲಿ ಎರಡನೇ ಬಾರಿಗೆ ಭಾರತಕ್ಕೆ ಆಗಮಿಸಿ, ಉಭಯತ್ರರ ಸಾಮಾಜಿಕ-ಆರ್ಥಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ” ಎಂದರು.