ಮೂಡಿಗೆರೆ: ದೇಶದ ಉನ್ನತ ಗ್ರಂಥಗಳಲ್ಲಿ ರಾಮರಾಜ್ಯದ ಕಲ್ಪನೆಯನ್ನು ಪ್ರಥಮ ಭಾರಿಗೆ ದಾಖಲಿಸಿ ಸ್ವಯಂ ಪರಿವರ್ತನೆ ಹೊಂದಿ ಸಮಾಜದ ಪರಿವರ್ತನೆಗೆ ಕಾರಣರಾದವರು ಮಹರ್ಷಿ ವಾಲ್ಮೀಕಿ. ಅವರ ಆದರ್ಶಗಳು ಇಂದಿನ ಸಮಾಜಕ್ಕೆ ದಾರಿದೀಪ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಅವರು, ಮಾತನಾಡಿದರು.
ರಾಮಾಯಣವನ್ನು ಬರೆದು ಲೋಕಕಲ್ಯಾಣಕ್ಕೆ ಮುನ್ನುಡಿ ಬರೆದವರು ವಾಲ್ಮೀಕಿಗಳು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎನ್.ರವಿಪ್ರಕಾಶ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅರೇಕೊಡಿಗೆ ಶಿವಣ್ಣ, ಜ್ಯೋತಿ, ಮಹರ್ಷಿ ವಾಲ್ಮೀಕಿ ಜನ್ಮವೃತ್ತಾಂತ ತಿಳಿಸಿದರು.
ಇದೇ ಸಂದರ್ಭದಲ್ಲಿ ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ಗಿರಿಜನರಿಗೆ ಅರಣ್ಯ ಹಕ್ಕುಪತ್ರ, ಕಂದಾಯ ಇಲಾಖೆ ಮತ್ತಿತರೆ ಇಲಾಖೆ ಗಳಿಂದ ವಿವಿಧ ಸೌಲಭ್ಯ ವಿತರಿಸಲಾಯಿತು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಂಜನ್ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.