ಶ್ರೀರಂಗಪಟ್ಟಣ: ಕವಿಗಳು ಸೌಂದರ್ಯೋಪಾಸನೆ ದೃಷ್ಟಿಯಿಂದ ಕತೆ, ಕವಿತೆ ಬರೆಯುವ ಜತೆಗೆ ಸಾಮಾಜಿಕ ಪರಿವರ್ತನೆಗೆ ಪೂರಕವಾದ ಸಾಹಿತ್ಯ ಸೃಷ್ಟಿಸಬೇಕು ಎಂದು ಸಾಹಿತಿ ಡಾ.ಕೃಷ್ಣಮೂರ್ತಿ ಚಮರಂ ಹೇಳಿದರು.
ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸೋಮವಾರ ಯುವ ಬರಹಗಾರರ ಬಳಗದ ತಾಲ್ಲೂಕು ಘಟಕ ಮತ್ತು ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.
ಶತಮಾನಗಳ ಕಾಲ ಒಂದು ವರ್ಗದ ಕೈಯಲ್ಲಿದ್ದ ಸಾಹಿತ್ಯ ಪರಿಚಾರಿಕೆ ಕುವೆಂಪು ನಂತರ ಶೂದ್ರರಿಗೂ ಸಿಕ್ಕಿದೆ. ಆದರೂ ವೈಚಾರಿಕತೆಯನ್ನು ವೈದಿಕತೆ ತಿಂದು ಹಾಕುತ್ತಿದೆ. ನಯ ನಾಜೂಕಿನಿಂದ ಶೂದ್ರ ಕವಿ, ಕತೆಗಾರರನ್ನು ದಮನ ಮಾಡುವ ಹುನ್ನಾರ ನಡೆಯುತ್ತಿದೆ ಎಂದರು.
ಪ್ರೊ.ಕರಿಮುದ್ದೀನ್ ಮಾತನಾಡಿ, ಕವಿಯಾದವನಿಗೆ ವಾಸ್ತವಿಕತೆಯ ಪರಿಜ್ಞಾನ ಇರಬೇಕು. ಸತ್ಯದ ಅನ್ವೇಷಣೆ ಮುಖ್ಯವಾಗಬೇಕು. ಸಹನೆ ಮತ್ತು ತಾಳ್ಮೆ ಇಲ್ಲದಿದ್ದರೆ ಉತ್ತಮ ಸಾಹಿತ್ಯ ಸೃಷ್ಟಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ, ಕಸಾಪ ತಾಲ್ಲೂಕು ಅಧ್ಯಕ್ಷ ಬಲ್ಲೇನಹಳ್ಳಿ ಶಂಕರ್, ತಾ.ಪಂ. ಮಾಜಿ ಅಧ್ಯಕ್ಷ ಟಿ.ಶ್ರೀಧರ್, ಯುವ ಬರಹಗಾರರ ಬಳಗದ ಜಿಲ್ಲಾಧ್ಯಕ್ಷ ಸತೀಶ್ ಜವರೇಗೌಡ ಮಾತನಾಡಿದರು.
ಡಾ.ಸುಜಯಕುಮಾರ್, ಬಳಗದ ತಾಲ್ಲೂಕು ಅಧ್ಯಕ್ಷ ಕೆ.ಶೆಟ್ಟಹಳ್ಳಿ ಅಪ್ಪಾಜಿ, ಎಂ.ಸಿ.ಪ್ರಕಾಶ್, ಚಂದ್ರಮೌಳಿ ಇದ್ದರು. ಕೊ.ನಾ.ಪುರುಷೋತ್ತಮ ಅವರ ಏಕವ್ಯಕ್ತಿ ಚಿತ್ರ ಪ್ರದರ್ಶನ ಗಮನ ಸೆಳೆಯಿತು. ಕೊತ್ತತ್ತಿ ರಾಜು, ಧನಂಜಯ, ಅ.ಮ.ಶ್ಯಾಮೇಶ್, ಸೋಮಣ್ಣ, ಶ್ರುತಿ ಪಾಲಹಳ್ಳಿ, ಸಿ.ಬಿ.ಉಮಾಶಂಕರ್, ರಾಜಶೇಖರ್ ಇತರರು ಕವಿತೆ ವಾಚಿಸಿದರು.