ಬೆಂಗಳೂರು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಯ ಮೊದಲ ಸಭೆ ಶಾಸಕ ಎಂ. ಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಶಾಸಕರ ಭವನದಲ್ಲಿ ಬುಧವಾರ ನಡೆಯಿತು. ಈ ಸಮಿತಿ ವಿಧಾನಸಭೆಯ 15 ಮತ್ತು ಪರಿಷತ್ತಿನ ನಾಲ್ವರು ಸದಸ್ಯರನ್ನು ಒಳಗೊಂಡಿದೆ.
ಸಭೆಯಲ್ಲಿ ಚರ್ಚೆಗೆ ಬಂದ ವಿಚಾರಗಳ ಕುರಿತು `ಪ್ರಜಾವಾಣಿ~ಗೆ ಮಾಹಿತಿ ನೀಡಿದ ವಿಧಾನ ಪರಿಷತ್ ಸದಸ್ಯ ಡಾ. ಮುಮ್ತಾಜ್ ಅಲಿ ಖಾನ್ ಅವರು, `ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ಸರ್ಕಾರ ಹಾಕಿಕೊಂಡಿರುವ ಯೋಜನೆಗಳು ಯಾವ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂದಿವೆ ಎಂಬ ಕುರಿತು ಸಭೆ ಚರ್ಚಿಸಿತು~ ಎಂದು ತಿಳಿಸಿದರು.
`ಪರಿಶಿಷ್ಟರಿಗಾಗಿ ಆರಂಭಿಸಲಾದ ಯೋಜನೆಗಳ ಪರಿಣಾಮ ಏನು, ತಳ ಸಮುದಾಯಗಳ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ಮೀಸಲಿಟ್ಟ ಅನುದಾನ ಯಾವ ಪ್ರಮಾಣದಲ್ಲಿ ಬಳಕೆಯಾಗಿದೆ ಎಂಬ ಕುರಿತು ಗಮನಹರಿಸಲು ಈ ಸಮಿತಿಯನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ಚರ್ಚೆ ನಡೆಯಿತು~ ಎಂದು ಅವರು ತಿಳಿಸಿದರು.