ಶಿವಮೊಗ್ಗ: ರಾಜ್ಯದಲ್ಲಿ ಪರಿಶಿಷ್ಟ ವರ್ಗಗಳ ಮೀಸಲಾತಿ ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣವಾಗಿ ಶೇ. 7.5ಗೆ ಏರಿಸುವಂತೆ ಒತ್ತಾಯಿಸಿ ಜಿಲ್ಲಾ ವಾಲ್ಮೀಕಿ ಯುವಸೇನೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ಮೆರವಣಿಗೆ ನಡೆಸಿದರು.
ರಾಜ್ಯದಲ್ಲಿ ಪರಿಶಿಷ್ಟ ವರ್ಗಗಳ ಮೀಸಲಾತಿ ಪ್ರಮಾಣ ಕೇಂದ್ರ ಸರ್ಕಾರದಲ್ಲಿ ಶೇ. 7.5 ಇದೆ. ಅದಕ್ಕೆ ತದ್ವಿರುದ್ಧವಾಗಿ ಕೇವಲ ಶೇ. 3ರಷ್ಟು ಮಾತ್ರ ಇದೆ. ಅಲ್ಲದೇ, ಮೀಸಲಾತಿ ಆರಂಭವಾದ 1950ರ ಸಮಯದಲ್ಲಿದ್ದ ಶೇ. 3ರಷ್ಟು ಮೀಸಲಾತಿ ಇನ್ನೂ ಬದಲಾಗಿಲ್ಲ. 1977ರಲ್ಲಿಯೇ ನಾಯಕ ಜನಾಂಗವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಿದ್ದರೂ ಮೀಸಲಾತಿ ಪ್ರಮಾಣ ಏರಿಸಿಲ್ಲ ಎಂದು ಆರೋಪಿಸಿದರು.
ಇದಕ್ಕೂ ಮೊದಲು ನಾಯಕ ಜನಾಂಗ ಹಿಂದುಳಿದ ಪಂಗಡದಲ್ಲಿ ಸೇರ್ಪಡೆಯಾಗಿ ಶೇ. 5ರಷ್ಟು ಮೀಸಲಾತಿ ಪಡೆಯುತ್ತಿತ್ತು. ಆದರೆ, ಪರಿಶಿಷ್ಟ ವರ್ಗಕ್ಕೆ ಸೇರ್ಪಡೆಯಾದ ನಂತರ ಸೌಲಭ್ಯ ಶೇ. 3ಕ್ಕೆ ಇಳಿಸಿ, ಪರಿಶಿಷ್ಟ ವರ್ಗದಲ್ಲಿದ್ದ ಜನಾಂಗಗಳ ಜತೆ ಮಿತಿಗೊಳಿಸಿದೆ ಎಂದು ದೂರಿದರು.
ಜನಸಂಖ್ಯೆಗೆ ಅನುಗುಣವಾಗಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 15ಕ್ಷೇತ್ರಗಳನ್ನು ಪರಿಶಿಷ್ಟ ವರ್ಗಕ್ಕೆ ಮೀಸಲಿಟ್ಟಿದ್ದರೂ, ಶೈಕ್ಷಣಿಕ ಹಾಗೂ ಉದ್ಯೋಗದ ವಿಚಾರದಲ್ಲಿ ಶೇ. 3ರಷ್ಟು ಮೀಸಲಾತಿ ನೀಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ, ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಮುಂದೆ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ವಾಲ್ಮೀಕಿ ಯುವಸೇನೆ ಅಧ್ಯಕ್ಷ ಈ. ದುರ್ಗೇಶ್ಕುಮಾರ್, ಕಾರ್ಯಾಧ್ಯಕ್ಷ ಆರ್. ಹರೀಶ್, ಪ್ರಧಾನ ಕಾರ್ಯದರ್ಶಿ ಎಸ್.ಎನ್. ಮೇಘರಾಜ್, ಟಿ. ಶಿವಪ್ಪ, ಎಚ್.ಆರ್. ಸೋಮಶೇಖರಪ್ಪ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.