ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ‘ಸರ್ಕಾರ ಪರಿಷತ್ತನ್ನು ನಿರ್ಲಕ್ಷಿಸಿದೆ, ಬೀಗ ಹಾಕಿ ಬಿಡಿ’ ಎಂದವರು (ಡಿ. 15) ಮುಂದೆ ‘ಪರಿಷತ್ತಿಗೆ ಸ್ಥಾನಮಾನ, ಅನುದಾನ ನೀಡುವುದು ಸರ್ಕಾರದ ಕರ್ತವ್ಯ. ಬೀಗ ಹಾಕಿ ಸುಮ್ಮನೆ ಹೋಗದೆ ನಿರಶನ ನಡೆಸುತ್ತೇನೆ’ ಎಂದರು (ಡಿ. 23).
ಇದು ಒಂದು ಬಗೆಯ ಟ್ರೇಡ್ ಯೂನಿಯನ್ ಶೈಲಿಯ ಮಾರ್ಗ (ಅವರು ಹಿಂದೆ ಆ ಬಗೆಯ ಸಂಘಟನೆಯಲ್ಲಿದ್ದವರಲ್ಲವೇ!) ರಾಜ್ಯ ಸರ್ಕಾರದ ವಾರ್ಷಿಕ ಬಜೆಟ್ನಲ್ಲಿ ಕಸಾಪ ತಾಲ್ಲೂಕು, ಜಿಲ್ಲಾ ಘಟಕಗಳಿಗೆ ಹಣ ನೀಡುತ್ತಿರುವುದೇ ಸರಿ ಕಾಣದು. ಶತಮಾನೋತ್ಸವ ಸಂಭ್ರಮಕ್ಕೆ ₨ 7 ಕೋಟಿ ವ್ಯಯಿಸುವ ಬದಲು ನಿಘಂಟು ನಿರ್ಮಾಣದಂತಹ ದೀರ್ಘಕಾಲಿಕ ಉಪಯುಕ್ತದ ಕೆಲಸಗಳನ್ನು ಹಮ್ಮಿ
ಕೊಳ್ಳುವುದು ಸೂಕ್ತ.
ಕನ್ನಡವನ್ನು ಕೇವಲ ಕಟ್ಟಡಗಳಿಂದ ಕಟ್ಟಲಾಗದು, ವಿವಿಧ ಪ್ರಶಸ್ತಿ ಪಡೆದವರಿಗೆ ಸನ್ಮಾನ ಏರ್ಪಡಿ ಸುವುದರಿಂದಲೂ ಅಲ್ಲ. ಮುಂದಿನ ಏಳೆಂಟು ವರ್ಷಗಳಲ್ಲಿ ವಿವಿಧ ವಿಷಯ, ಕ್ಷೇತ್ರಗಳಲ್ಲಿ ಅದನ್ನು ಸಜ್ಜು, ಸಶಕ್ತಗೊಳಿಸುವುದರಿಂದ ಸಾಧ್ಯ.
ನನಗೆ ನಾ. ಡಿಸೋಜ ಅವರ ಬರಹ, ಸರಳತೆಗಳು ಮೆಚ್ಚುಗೆಯೆನಿಸಿದರೂ ಸಾಹಿತ್ಯ ಪರಿಷತ್ತು ಸೂಕ್ತ ಆದ್ಯತೆಗಳನ್ನು ಗುರುತಿಸಿಕೊಳ್ಳಬೇಕೆಂದು ಅವರು ಆಗ್ರಹಿಸುತ್ತಾರೆಯೇ ಎಂಬುದರ ಬಗೆಗೆ ಸಂದೇಹವಿದೆ.
‘ಸಮ್ಮೇಳನವನ್ನು ಎರಡು ವರ್ಷಕ್ಕೊಮ್ಮೆ ನಡೆಸಿದರೆ ಸಾಕು’ ಎಂಬ ಹಾಲಂಬಿ ಅವರ ಅಭಿಪ್ರಾಯದ ಬಗೆಗೆ ಸರ್ವಾನುಮತ ಮೂಡೀತೆ? ಜನ ಬೆಂಬಲವೆಂಬ ಬೇರು ಕ್ಷೀಣಿಸಿ, ಸರ್ಕಾರಿ ಪೋಷಣೆಯೆಂಬ ಬಿಳಲಿನ ಮೇಲೆ ಪರಿಷತ್ತು ನಿಲ್ಲುವುದು ಆರೋಗ್ಯಕರ ಬೆಳವಣಿಗೆ ಸಲ್ಲ.