ನಮ್ಮ ಉಳಿವಿಗೆ, ಪ್ರಾಣಿ, ಪಕ್ಷಿ, ಸಸ್ಯ ಸಂಕುಲದ ಉಳಿವಿಗೆ ಪರಿಶುದ್ಧ ಹವೆ, ವೈಪರೀತ್ಯಗಳಿಲ್ಲದ ಹವಾಮಾನ ಅತ್ಯಗತ್ಯ. ಭೂಮಿ, ಜೀವಸಂಕುಲದ ಉಳಿವಿಗಾಗಿ ಹೋರಾಡುತ್ತಿರುವ ಗ್ರೀನ್ಪೀಸ್ ಸಂಘಟನೆ ಪರಿಸರ ಸ್ನೇಹಿ ಇಂಧನ ಬಳಕೆ ಕುರಿತು ಜಾಗೃತಿ ಮೂಡಿಸಲು `ಮೂವಿಂಗ್ ಪ್ಲಾನೆಟ್~ ಎಂಬ ವಿಶ್ವವ್ಯಾಪಿ ಅಭಿಯಾನ ಹಮ್ಮಿಕೊಂಡಿದೆ.
ಹವಾಮಾನ ವೈಪರೀತ್ಯದ ವಿರುದ್ಧ ಹೋರಾಡುವ ಈ ಅಭಿಯಾನದಲ್ಲಿ 167 ದೇಶಗಳ ಸಾವಿರಾರು ನಾಗರಿಕರು ಕೈಜೋಡಿಸಿದ್ದಾರೆ.
`ಮೂವಿಂಗ್ ಪ್ಲಾನೆಟ್~ ಅಭಿಯಾನದ ಅಂಗವಾಗಿ ಗ್ರೀನ್ಪೀಸ್, 350 ಡಾಟ್ ಆರ್ಗ್ ಸಂಘಟನೆಯ ಸಹಯೋಗದಲ್ಲಿ ನಗರದಲ್ಲಿ ಇತ್ತೀಚೆಗೆ ಸೈಕಲ್ ರ್ಯಾಲಿ ಆಯೋಜಿಸಿತ್ತು. ಫ್ರೀಡಂ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಕಥಾನ್, ಟ್ರೆಷರ್ ಹಂಟ್ ಇತ್ಯಾದಿ ಚಟುವಟಿಕೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಆಕರ್ಷಕ ಬಹುಮಾನ ವಿತರಿಸಲಾಯಿತು.
ಹವಾಮಾನ ವೈಪರೀತ್ಯ ತಡೆಗಟ್ಟಲು, ಪರಿಸರಸ್ನೇಹಿ ಇಂಧನ ವ್ಯವಸ್ಥೆ ಜಾರಿಯಲ್ಲಿ ಇರಲು ಸರ್ಕಾರಗಳನ್ನು ಒತ್ತಾಯಿಸುವುದು ಈ ಆಂದೋಲನದ ಗುರಿ ಎಂದು ಗ್ರೀನ್ಪೀಸ್ ಕಾರ್ಯಕರ್ತ ಶಿವ ಶರ್ಮಾ ಹೇಳಿದರು.
ಬೆಂಗಳೂರು ಹೊರತಾಗಿ ದೆಹಲಿ, ಮುಂಬೈ, ಆಂಧ್ರಪ್ರದೇಶದ ಓಂಗೊಲ್ನಲ್ಲಿ ಜಾಗೃತಿ ಅಭಿಯಾನ ಕೈಗೊಳ್ಳಲಾಗಿದ್ದು, ಇಲ್ಲಿನ ಛಾಯಾಚಿತ್ರಗಳನ್ನು ವಿಶ್ವಸಂಸ್ಥೆ ಕೇಂದ್ರ ಕಚೇರಿ ಎದುರು ನಡೆಯಲಿರುವ ರ್ಯಾಲಿಯಲ್ಲಿ ಪ್ರದರ್ಶಿಸಲಾಗುವುದು ಎಂದು ಗ್ರೀನ್ಪೀಸ್ ಹೇಳಿದೆ.