ಕಾರ್ಗಲ್: ಪರಿಸರ ಜಾಗೃತಿ ಮೂಡಿಸುವುದು ಸಂಸ್ಕೃತಿಯ ಒಂದು ಭಾಗ ಎಂದು ಸಮಾಜ ಸೇವಕ ಎಸ್.ಎಂ ಪೈ ಅಭಿಪ್ರಾಯಪಟ್ಟರು.
ಇಲ್ಲಿನ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ತಾಳಗುಪ್ಪ ವಲಯ ಮಟ್ಟದ ಪರಿಸರ ಜಾಗೃತಿ ಜಾಥಾ ಮತ್ತು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪರಿಸರದಲ್ಲಿ ಸಮತೋಲನ ಕಂಡುಕೊಳ್ಳುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದರು. ಈ ನಿಟ್ಟಿನಲ್ಲಿ ಮಹಿಳೆಯರು ಉತ್ತಮ ಪರಿಸರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತು ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸುವ ಸಂಕಲ್ಪ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿವಮೊಗ್ಗ ವಲಯ ನಿರ್ದೇಶಕ ಸುಧೀಂದ್ರ ಕುಮಾರ್ ಮಾತನಾಡಿದರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಕೆ.ಸಿ. ಹರೀಶ್ಗೌಡ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಮಹಿಳಾ ಸಮಾಜದ ಅಧ್ಯಕ್ಷೆ ಲಕ್ಷ್ಮಿ ರಾಜು ಭಾಗವಹಿಸಿದ್ದರು.
ಅರಣ್ಯಾಧಿಕಾರಿ ಕೆ.ಪಿ. ಕಿರಣ್ ಗಿಡಗಳನ್ನು ವಿತರಿಸಿದರು. ವಲಯ ಒಕ್ಕೂಟದ ಅಧ್ಯಕ್ಷ ವೀರರಾಜು ಮಾತನಾಡಿದರು. ಮೇಲ್ವಿಚಾರಕ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.