ಕೆ.ಆರ್.ನಗರ: `ಪರಿಸರದ ಒಡನಾಟ ತೊರೆದು ಮನುಷ್ಯ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ~ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಸಿದ್ದಲಿಂಗಯ್ಯ ಗುರುವಾರ ಅಭಿಪ್ರಾಯಪಟ್ಟರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಗುರುವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಗೋಳ ಇಂದು ಜನಗೋಳವಾಗಿದೆ. ದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಜನ ವಾಸಿಸುತ್ತಿರುವುದರಿಂದ ಮಾಲಿನ್ಯ ಉಂಟಾಗುತ್ತಿದೆ. ಮೊದಲು ಮನೋ ಮಾಲಿನ್ಯ ತಡೆಯಬೇಕಾಗಿದೆ. ಮನೋ ಮಾಲಿನ್ಯ ತಡೆಯದಿದ್ದಲ್ಲಿ ಯಾವ ಮಾಲಿನ್ಯವೂ ತಡೆಯಲು ಸಾಧ್ಯವಿಲ್ಲ ಎಂದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇಗೌಡ ಮಾತ ನಾಡಿ, ಪರಿಸರ ದಿನವನ್ನು ಆಚರಿ ಸುವುದು ನಾವೇ. ಮರಗಳನ್ನು ಕಡಿಯುವವರೂ ನಾವೇ. ಇದರಿಂದ ಪರಿಸರ ಹೇಗೆ ಉಳಿದುಕೊಳ್ಳುತ್ತದೆ ಎಂದು ಪ್ರಶ್ನಿಸಿದ ಅವರು, ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಹೇಳುವ ಸರ್ಕಾರವೇ ಹೊಗೆಸೊಪ್ಪು ಬೆಳಯಲು ಅನುಮತಿ ಕೊಡುತ್ತದೆ ಎಂದು ಟೀಕಿಸಿದರು.
ಪಾಂಡುರಂಗೇಗೌಡ ಮಾತನಾಡಿ, ಪರಿಸರ ಸಮತೋಲನ ವಾಗಿಟ್ಟು ಕೊಳ್ಳಲು ನಮ್ಮ ದೇಶದಲ್ಲಿ ಶೇ 30ರಷ್ಟು ಅರಣ್ಯ ಪ್ರದೇಶ ಅವಶ್ಯಕವಾಗಿದೆ. ಆದರೆ ಈಗ ನಮ್ಮ ದೇಶದಲ್ಲಿ ಶೇ 22 ರಷ್ಟು ಅರಣ್ಯ ಪ್ರದೇಶ ಹೊಂದಿದೆ ಎಂದು ಸರ್ಕಾರ ಹೇಳಿದೆ. ಆದರೆ ನಮ್ಮ ದೇಶಗಳಲ್ಲಿನ ನಗರ ಮತ್ತು ಪಟ್ಟಣಗಳ ಬೆಳವಣಿಗೆಗಳನ್ನು ನೋಡಿದರೆ ಸರ್ಕಾರ ಹೇಳಿದಂತೆಯೂ ಇಂದು ಅರಣ್ಯ ಪ್ರದೇಶ ಉಳಿದುಕೊಂಡಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಮಿಥಿಲಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಲೋಕನಾಥ್ ಮಾತನಾಡಿ, ಮನುಷ್ಯನ ಅತಿಯಾದ ಬುದ್ಧಿವಂತಿಕೆಯಿಂದ ಇಂದು ತಿನ್ನುವ ಆಹಾರ, ಕುಡಿಯುವ ನೀರು, ಬೀಸುವ ಗಾಳಿ ಸೇರಿದಂತೆ ಎಲ್ಲವೂ ಕಲುಷಿತ ಗೊಂಡಿದೆ. ಇದರಿಂದ ಮನುಕುಲಕ್ಕೆ ಅವಶ್ಯವಾಗಿರುವ ಗಿಡ ಮರಗಳನ್ನು ಪ್ರತಿಯೊಬ್ಬರು ಬೆಳೆಸಬೇಕಾಗಿದೆ, ರಕ್ಷಿಸಬೇಕಾಗಿದೆ ಎಂದರು.
ಸಂಘದ ಅಧ್ಯಕ್ಷ ಎಂ.ಟಿ.ಅಣ್ಣೇ ಗೌಡ, ಕಾರ್ಯದರ್ಶಿ ಅಣ್ಣಾಜಿಗೌಡ, ಶಿವಾನಂದ ಸ್ವಾಮೀಜಿ ಮಾತ ನಾಡಿ ದರು. ನಿರ್ದೇಶಕ ಎಚ್.ಪಿ.ಶಿವಣ್ಣ, ಎಚ್.ಎಸ್.ಚಂದ್ರೇಗೌಡ, ಜವರೇ ಗೌಡ, ಪ್ರಾಂಶುಪಾಲ ಧನಂಜಯ, ಮುಖ್ಯ ಶಿಕ್ಷಕ ಜವರೇಗೌಡ, ಮುಖ್ಯ ಶಿಕ್ಷಕಿ ಲಕ್ಷ್ಮೀ, ಸಹಶಿಕ್ಷಕ ಪುನಿತ್, ಕಲ್ಲ ಹಳ್ಳಿ ಬಾಬು ಇತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.