ಸಾಗರ: ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುವ ಯೋಜನೆಗಳಿಗೆ ಇನ್ನಾದರೂ ತಡೆಯೊಡ್ಡಬೇಕು ಎಂದು ಜೋಷಿ ಫೌಂಡೇಷನ್ನ ದಿನೇಶ್ಕುಮಾರ್ ಎನ್. ಜೋಷಿ ಹೇಳಿದರು.
ಮಲೆನಾಡು ಮುದ್ರಕರ ಸಂಘ ಶನಿವಾರ ಏರ್ಪಡಿಸಿದ್ದ ಪರಿಸರ ದಿನಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಹಾಗೂ ಅಭಿವೃದ್ಧಿ ನಡುವೆ ಸಮನ್ವಯತೆ ತರಬೇಕು ಎಂಬ ಮಾತು ಕೇವಲ ಹೇಳಿಕೆ ಮಟ್ಟದಲ್ಲಿ ಉಳಿದಿರುವುದರಿಂದ ಪರಿಸರದ ಮೇಲೆ ನಿರಂತರ ಆಕ್ರಮಣ ನಡೆಯುತ್ತಿದೆ ಎಂದರು.
ಕೇವಲ ಸಸಿಗಳನ್ನು ನೆಡುವುದರಿಂದ ಪರಿಸರದ ಸಂರಕ್ಷಣೆ ಆಗುವುದಿಲ್ಲ. ಸಸಿಗಳನ್ನು ನೆಡುವುದರ ಜೊತೆಗೆ ಅವುಗಳ ಸಂರಕ್ಷಣೆ ಮಾಡುವುದು ಕೂಡ ಮುಖ್ಯ. ಇದರ ಜೊತೆಗೆ ಹೆಚ್ಚು ವಸ್ತುಗಳನ್ನು ಬಳಸುವ ಉಪಭೋಗ ಸಂಸ್ಕೃತಿಗೆ ತಿಲಾಂಜಲಿ ಹೇಳಬೇಕು ಎಂದು ಹೇಳಿದರು.
ತಹಶೀಲ್ದಾರ್ ಯೋಗೇಶ್ವರ್ ಮಾತನಾಡಿ, ಮನುಷ್ಯನ ಸ್ವಾರ್ಥ ಮತ್ತು ದುರಾಸೆಯೆ ಪರಿಸರ ನಾಶಕ್ಕೆ ಕಾರಣವಾಗಿದೆ. ನಮ್ಮ ಜೀವನ ಶೈಲಿ ಪರಿಸರದ ಸಂರಕ್ಷಣೆಗೆ ಪೂರಕವಾಗಿ ಇರಬೇಕು ಎಂದರು.
ಇದೇ ಸಂದರ್ಭದಲ್ಲಿ ಅಂಧ ಕಂಪ್ಯೂಟರ್ ತಜ್ಞ ಟಿ.ಎಸ್. ಶ್ರೀಧರ್ ಅಬಸೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಅಶ್ವಿನಿ ಶ್ಯಾನುಭಾಗ್, ದೀಪಾ, ಪ್ರಜ್ಞಾ ಅವರನ್ನು ಸನ್ಮಾನಿಸಲಾಯಿತು .
ಮಲೆನಾಡು ಮುದ್ರಕರ ಸಂಘದ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಮಾಧುರಿ ಬಾಪಟ್, ಮೃತ್ಯುಂಜಯ, ಕೆ.ಆರ್. ಆನಂದ, ಸತೀಶ್, ಪ್ರತಿಭಾ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಾ.ಸ. ನಂಜುಂಡಸ್ವಾಮಿ ಹಾಜರಿದ್ದರು.