ದೇವನಹಳ್ಳಿ: ಪರಿಸರ ನಾಶದಿಂದ ವಾತಾವರಣದಲ್ಲಿ ಅಸಮತೋಲನ ಉಂಟಾಗುತ್ತಿದೆ ಎಂದು ಉಪ ಪೊಲೀಸ್ ಆಯುಕ್ತ ಜಾರ್ಜ್ ಜಾಯ್ಡಿಸೋಜ ತಿಳಿಸಿದರು. ಇಲ್ಲಿನ ಕೋಡಿಮಂಚೇನಹಳ್ಳಿ ಪೊಲೀಸ್ ವಸತಿ ಸಮುಚ್ಚಯದ ಆವರಣದಲ್ಲಿ ತಾಲ್ಲೂಕು ಸೇವಾದಳ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಕೃತಿ ಜೀವ ಜಗತ್ತಿನ ಅದ್ಭುತ ಕೊಡುಗೆ. ಪ್ರಕೃತಿ ಸಂಪತ್ತನ್ನು ಉಳಿಸುವ ಪ್ರಯತ್ನದಲ್ಲಿ ಮಾನವ ಹಿಂದೆ ಬಿದ್ದಿದ್ದಾನೆ. ಉತ್ತಮ ಆರೋಗ್ಯ ಪರಿಸರದಿಂದ ಮಾತ್ರ ಸಾಧ್ಯ ಎಂದರು.
ತಾಲ್ಲೂಕು ಸೇವಾದಳ ಘಟಕದ ಅಧ್ಯಕ್ಷ ಎಸ್.ಲಕ್ಷ್ಮಿನಾರಾಯಣ ಮಾತನಾಡಿ, ತಾಲ್ಲೂಕಿನಲ್ಲಿ ಹಸಿರು ಹೊದಿಕೆ ನಿರ್ಮಾಣ ಗುರಿಯನ್ನಿಟ್ಟುಕೊಂಡು ವಿವಿಧ ಕಡೆಗಳಲ್ಲಿ ಸಸಿ ನೆಡಲಾಗಿದೆ. ಸಸಿಗಳಿಗೆ ಅಗತ್ಯ ನೀರುಣಿಸುವ ಕೆಲಸವನ್ನು ಸಂಬಂಧಪಟ್ಟ ಗ್ರಾಮದ ಯುವಕರು, ಮುಖಂಡರು ಮಾಡಬೇಕು ಎಂದು ಸಲಹೆ ನೀಡಿದರು. ಸೇವಾದಳ ಕಾರ್ಯದರ್ಶಿ ಎ.ಶಿವರಾಮಯ್ಯ ಮಾತನಾಡಿ, ಸಸಿ ನೆಡುವುದು ಎಷ್ಟು ಪ್ರಾಮುಖ್ಯವೋ ಪಾಲನೆಯೂ ಅಷ್ಟೇ ಮುಖ್ಯ.
ಸಾರ್ವಜನಿಕರು ಹೆಚ್ಚು ಗಮನ ಹರಿಸಿ ಜನಜನವಾರುಗಳಿಂದ ನೆಟ್ಟಗಿಡಗಳನ್ನು ರಕ್ಷಿಸಬೇಕು ಎಂದರು. ಇನ್ಸ್ಪೆಕ್ಟರ್ ವಿದ್ಯಾಧರ ಬಾಯ್ಕೆರಿಕರ್ ಮಾತನಾಡಿದರು. ಮದನಗೋಪಾಲ್, ಕೃಷಿಕ ಸಮಾಜ ಅಧ್ಯಕ್ಷ ಆರ್.ರವಿಕುಮಾರ್, ಪುರಸಭೆ ಅಧ್ಯಕ್ಷೆ ರತ್ನಮ್ಮ ರವಿಕುಮಾರ್, ಪದ್ಮರಾಜ್, ಕನ್ನಡ ಗೆಳೆಯರ ಬಳಗದ ರವಿಕುಮಾರ್ ಇತರರು ಇದ್ದರು.