ನೆಲಮಂಗಲ: `ಮನುಷ್ಯನ ಆಕ್ರಮಣಶಾಲಿ ಬುದ್ಧಿಯಿಂದ ಪ್ರಕೃತಿ ಸಮತೋಲನ ತಪ್ಪಿ ಎಲ್ಲವೂ ಕಳೆದು ಹೋಗುತ್ತಿದೆ. ಅದನ್ನು ಸಂರಕ್ಷಿಸಬೇಕಾದವರೇ ಸರ್ಕಾರಕ್ಕೆ ಭಾರವಾಗುತ್ತಿದ್ದಾರೆ~ ಎಂದು ಶಿವಗಂಗೆಯ ಮೇಲಣಗವಿ ಮಠದ ಮಲಯ ಶಾಂತಮುನಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಶಿವಗಂಗೆಯ ಕರಿ ಆನೆ ಮಠದ ಆವರಣದಲ್ಲಿ ಬೆಂಗಳೂರಿನ ಗ್ಲೋಬಲ್ ಆಕಾಡೆಮಿ ಆಫ್ ಟೆಕ್ನಾಲಜಿ ಕಾಲೇಜು ಪಟ್ಟಣದ ಕುಮುದ್ವತಿ ನದಿ ಪುನಶ್ಚೇತನ ಸಮಿತಿಯ ಸಹಯೋಗದಲ್ಲಿ ಏರ್ಪಡಿಸಿದ್ದ ಶಿವಗಂಗೆ ಬೆಟ್ಟದ ಭೂಮಾಪನಾ ಶಿಬಿರದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ತುಳಸಿ ಗಿಡಕ್ಕೆ ನೀರುಣಿಸುವುದರ ಮೂಲಕ ಶಿಬಿರ ಉದ್ಘಾಟಿಸಿದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಆನಂದ್, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಭೂ ವಿಜ್ಞಾನಿ ಡಾ.ಎಲೆ ಲಿಂಗರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ನದಿ ಸಮಿತಿ ಅಧ್ಯಕ್ಷ ಬಾಳೇಕಾಯಿ ನಾಗರಾಜು ಶಿಬಿರದ ಅಧ್ಯಕ್ಷತೆ ವಹಿಸಿದ್ದರು.
ಈ ಪ್ರದೇಶದಲ್ಲಿ ನಿರಂತರವಾಗಿ ಬಂಡೆ ಸಿಡಿಸುವ ಕೆಲಸ ನಡೆಯುತ್ತಿದೆ ಎಂದು ಸಾರ್ವಜನಿಕರು ತಹಸೀಲ್ದಾರ್ ಗಮನಸೆಳೆದರು. ಈ ಬಗ್ಗೆ ತಕ್ಷಣ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಆಅನಿಲ್ಕುಮಾರ್ ಭರವಸೆ ನೀಡಿದರು. ಎಪಿಎಂಸಿ ಸದಸ್ಯ ಡಿ.ಪಿ.ಸುಬ್ಬರಾಮಯ್ಯ, ಗ್ಲೋಬಲ್ ಅಕಾಡೆಮಿಯ ಸಿವಿಲ್ ವಿಭಾಗದ ಮುಖ್ಯಸ್ಥ ಡಾ.ಸಿ.ವಿ.ಶ್ರೀನಿವಾಸ್, ಕಾರ್ಯನಿರ್ವಹಣಾಧಿಕಾರಿ ಡಾ.ಅಶ್ವತ್ಥಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಶೇಖರಪ್ಪ, ಡಾ.ಪ್ರಭುರಾಜ್, ದೊಡ್ಡಿ ಶಿವರಾಂ ಇದ್ದರು.