ಅಕ್ಕಿಆಲೂರ: ಇಲ್ಲಿಯ ಸರ್ಕಾರಿ ಉರ್ದು ಪ್ರೌಢಶಾಲೆ ಯಲ್ಲಿ ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ನ ಸಹಯೋಗದಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಅಭಿಯಾನವನ್ನು ಈಚೆಗೆ ಆಯೋಜಿಸಲಾಗಿತ್ತು.
ಅಭಿಯಾನದಲ್ಲಿ ಉಪನ್ಯಾಸ ನೀಡಿದ ಕೃಷಿ ವಿಜ್ಞಾನಿ ಡಾ. ರಾಜಕುಮಾರ ಜಿ.ಆರ್. ಅಲ್ಪಕಾಲದ ಸುಖಕ್ಕೆ ಮುಖಮಾಡಿರುವ ಮನುಷ್ಯ ಪಾಕೃತಿಕ ನಾಶಕ್ಕೆ ಮುಂದಾಗಿದ್ದಾನೆ. ಇತ್ತೀಚಿನ ವರ್ಷಗಳಲ್ಲಿ ಪರಿಸರ ನಾಶದ ದುಷ್ಕೃತ್ಯಗಳು ಹೇರಳವಾಗಿ ನಡೆದಿದ್ದು ಸಮೃದ್ಧ ಕಾಡು, ದಟ್ಟ ಅರಣ್ಯ ಪ್ರದೇಶಗಳು ಮಾಯ ವಾಗುತ್ತಿವೆ. ಅರಣ್ಯ ಲೂಟಿಕೋರರ ಸಂಖ್ಯೆ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿಕೊಂಡಿದ್ದ ಶಾಲೆಯ ಮುಖ್ಯ ಶಿಕ್ಷಕ ಎಲ್.ಬಿ. ಪೂಜಾರಿ ಮಾತನಾಡಿ ಪ್ಲಾಸ್ಟಿಕ್ ಬಳಕೆ ಮಾರಕ ಎಂಬುದರ ಅರಿವು ಇದ್ದರೂ ಕೂಡ ಬಳಕೆ ಈವರೆಗೂ ಕಡಿಮೆಯಾಗಿಲ್ಲ. ಪರಿಸರದಲ್ಲಿ ಹತ್ತು ಹಲವು ಆತಂಕಗಳಿಗೆ ಕಾರಣವಾಗುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ವಿದ್ಯಾರ್ಥಿಗಳು ವಿರೋಧಿಸುವ ಅಗತ್ಯವಿದೆ ಎಂದರು.
ಇಲ್ಲಿಯ ಕೃಷಿ ಡಿಪ್ಲೋಮಾ ಮಹಾವಿದ್ಯಾಲಯದ ಹರ್ಷ ಬಣಕಾರ, ಸಹಶಿಕ್ಷಕರಾದ ವಿಷ್ಣು ಪಟಗಾರ, ಎ.ಎಂ.ಇನಾಮದಾರ, ಎಸ್.ಎಸ್.ಪೀರಜಾದೆ, ನಾಜಿಯಾ ತಾಜ್, ಅನೀಸ್ ಫಾತಿಮಾ, ಎಸ್.ಎನ್.ನೆಗಳೂರ, ಎ.ಜಿ.ಮಣ್ಣಮ್ಮನವರ ಹಾಜರಿದ್ದರು.