ಚಿಕ್ಕಮಗಳೂರು: ಪರಿಸರ ಸಂರಕ್ಷಣೆಯ ಜನಜಾಗೃತಿ ಮೂಡಿಸಲು ಐ.ಡಿ.ಎಸ್.ಜಿ. ಪ್ರಥಮದರ್ಜೆ ಕಾಲೇ ಜಿನ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ನ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ವಿದ್ಯಾರ್ಥಿ ಗಳು ನಗರದಲ್ಲಿ ಗುರುವಾರ ಸೈಕಲ್ ಜಾಥಾ ನಡೆಸಿದರು.
ಕಾಲೇಜು ಆವರಣದಲ್ಲಿ ಬೆಳಿಗ್ಗೆ ಜಾಥಾಕ್ಕೆ ಚಾಲನೆ ನೀಡಿದ ಜಿ.ಪಂ. ಅಧ್ಯಕ್ಷೆ ರೇಖಾಹುಲಿಯಪ್ಪಗೌಡ, ಪರಿಸರ ಸಂರಕ್ಷಣೆ ಜಾಗತಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.
ಬೈಸಿಕಲ್ಗಳನ್ನು ಹೆಚ್ಚಾಗಿ ಬಳಸುವುದರಿಂದ ಇಂಧನ ಉಳಿಸುವ ಜತೆಗೆ ವಾಯು ಮಾಲಿನ್ಯ ನಿಯಂತ್ರಿಸಬಹುದು. ಚೀನಾದಲ್ಲಿ ಬೈಸಿಕಲ್ಗಳ ಬಳಕೆ ವ್ಯಾಪಕವಾಗಿದೆ. ಇದಕ್ಕಾಗಿಯೇ ವಿಶೇಷ ಪಥಗಳನ್ನು ಅಲ್ಲಿ ಮೀಸಲಿಟ್ಟಿದ್ದಾರೆ ಎಂದರು.
ಕಾಲೇಜು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ನಿಸರ್ಗ ಪ್ರೀತಿ, ಪರಿಸರ ಕಾಳಜಿ ಬೆಳೆ ಸುವಲ್ಲಿ ಸ್ಕೌಟ್ಸ್ ಆಂದೋಲನ ಪ್ರಮುಖ ಪಾತ್ರವಹಿಸುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಶಾಲೆಗಳಲ್ಲಿ ಸ್ಕೌಟ್ಸ್ ಅನ್ನು ಸರ್ಕಾರ ಕಡ್ಡಾಯಗೊಳಿಸಿದೆ ಎಂದು ತಿಳಿಸಿದರು.
ಕಾಲೇಜು ಪ್ರಾಂಶುಪಾಲರಾದ ಡಾ.ಜರೀನಾ ಕೌಸರ್, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಡಿ.ತಮ್ಮಯ್ಯ, ಕಾರ್ಯಾಧ್ಯಕ್ಷ ಬಿ.ಎಚ್.ನರೇಂದ್ರ ಪೈ, ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ರಾಜಣ್ಣ, ಡಾ.ಸುಂದರೇಶ್, ರೋವರ್ಸ್ ಲೀಡರ್ ಬಿ. ಯೋಗೀಶ್, ರೇಂಜರ್ಸ್ ಲೀಡರ್ ಡಾ.ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜಿನಿಂದ ಸೈಕಲ್ ಜಾಥಾ ಹೊರಟ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆ ತ್ಯಜಿಸುವಂತೆ, ಗಿಡಮರ ಬೆಳೆಸುವುದು, ಪರಿಸರ ಸಂರಕ್ಷಣೆ ಬಗ್ಗೆ ಸಂದೇಶ ಸಾರುವ ಫಲಕಗಳನ್ನು ಪ್ರದರ್ಶಿಸಿ, ಪರಿಸರ ಸಂರಕ್ಷಣೆ ಜಾಗೃತಿಯ ಸಂದೇಶ ಸಾರಿದರು. ತಾಳಯ್ಯನಗಿರಿ ನಂತರ ಮುಳ್ಳಯ್ಯನಗಿರಿ ಶಿಖರ ತಲುಪಿದ ರೋವರ್ಸ್ ಮತ್ತು ರೇಂಜರ್ಸ್ ತಂಡ ಸುಡು ಬಿಸಿಲಿನಲ್ಲೂ ಶ್ರಮದಾನ ಕೈಗೊಂಡು ಪ್ಲಾಸ್ಟಿಕ್, ಇನ್ನಿತರ ಕಸ ಆರಿಸಿ, ಒಂದೆಡೆ ಹಾಕಿ ವಾಪಸಾದರು.