ಜನವಾಡ: ಬೀದರ್ ತಾಲ್ಲೂಕಿನ ಜನವಾಡ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪರಿಸರ ಸ್ನೇಹಿ ಗಣಪನನ್ನು ತಯಾರಿಸುವ ಮೂಲಕ ಗಮನ ಸೆಳೆದರು.
ಪರಿಸರದ ಬಗೆಗೆ ಜಾಗೃತಿ ಮೂಡಿಸಲು ಚಿತ್ರಕಲಾ ಶಿಕ್ಷಕಿ ಮಂಗಲಾ ಪೋಳ್ ಮಂಗಳವಾರ ಮಕ್ಕಳಿಗೆ ಪರಿಸರ ಸ್ನೇಹಿ ಗಣಪನನ್ನು ಸಿದ್ಧಪಡಿಸುವ ಸ್ಪರ್ಧೆ ಏರ್ಪಡಿಸಿದ್ದರು.
ಶಿಕ್ಷಕಿ ಖುದ್ದು ಮಣ್ಣಿನಿಂದ ಗಣೇಶನ ಮೂರ್ತಿಯನ್ನು ಸಿದ್ಧಪಡಿಸುವ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು ಬಳಿಕ ಮಕ್ಕಳು ಮಣ್ಣಿನ ಗಣೇಶನನ್ನು ತಯಾರಿಸಿ ಸಂಭ್ರಮಿಸಿದರು. ಉತ್ತಮ ಗಣೇಶನನ್ನು ತಯಾರಿಸಿದವರು ಬಹುಮಾನಕ್ಕೂ ಭಾಜನರಾದರು.
ರಾಸಾಯನಿಕ ವಸ್ತುಗಳನ್ನು ಒಳಗೊಂಡ ಗಣೇಶ ಮೂರ್ತಿಗಳಿಂದ ಪರಿಸರಕ್ಕೆ ಹಾನಿ ಉಂಟಾಗಲಿದೆ. ಹೀಗಾಗಿ ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನೇ ಬಳಸಬೇಕು ಎಂದು ಶಿಕ್ಷಕಿ ಮನವಿ ಮಾಡಿದರು.
ಮುಖ್ಯಗುರು ಶೈಲಜಾ, ಸಿ.ಆರ್.ಪಿ. ರಾಜಕುಮಾರ್, ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿ ಅಶೋಕ್ ಸಜನೆ ಮತ್ತಿತರರು ಉಪಸ್ಥಿತರಿದ್ದರು.