ಚಿತ್ರದುರ್ಗ: ವೇದದ ಕಾಲದಲ್ಲಿಯೇ ಋಷಿಗಳು ಪರಿಸರದ ಬಗ್ಗೆ ಕಾಳಜಿ ವಹಿಸುವಂತೆ ಸೂಚನೆ ನೀಡಿದ್ದನ್ನು ಪಾಲಿಸದ ಕಾರಣ ಮಾನವ ಸಂಕಟಕ್ಕೆ ಗುರಿಯಾಗಿದ್ದಾನೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಶ್ರಿನಿವಾಸ್ ಹರೀಶ್ಕುಮಾರ್ ಅಭಿಪ್ರಾಯಪಟ್ಟರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಚೈತ್ರ ಸಾಹಸ ಅಕಾಡೆಮಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ ಹಾಗೂ ಬಾಪೂಜಿ ವಿದ್ಯಾಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶುದ್ಧವಾದ ಗಾಳಿ, ನೀರು, ಆಹಾರ ದೊರೆಯದೇ ಕಾರಣ ಮನುಷ್ಯ ತನ್ನ ಆಯಸ್ಸುನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾನೆ. ಪರಿಸರದ ನಾಶದ ಜತೆಗೆ ಪ್ರಾಣಿ, ಪಕ್ಷಿ ಸಂಕುಲ ನಾಶವಾಗುತ್ತಿದೆ. ಮುಂದಿನ ಮಕ್ಕಳಿಗೆ ಅವುಗಳನ್ನು ಚಿತ್ರದಲ್ಲಿ ತೋರಿಸಬೇಕಾದ ಪರಿಸ್ಥಿತಿ ನಿರ್ಮಾಣವಾದರೂ ಆಶ್ವರ್ಯವಿಲ್ಲ ಎಂದರು.
`ಪರಿಸರ ರಕ್ಷಣೆ ಮತ್ತು ಪರಿಸರ ಕಾನೂನು~ ಬಗ್ಗೆ ಉಪನ್ಯಾಸ ನೀಡಿದ ವನ್ಯಜೀವಿ ಪರಿಪಾಲಕ ಜಿ.ಟಿ. ಬಸವರಾಜ, ಪರಿಸರ ಹಾಳು ಮಾಡುತ್ತಿರುವವರ ಮೇಲೆ ಕ್ರಮ ಕೈಗೊಳ್ಳಲು ಹಲವಾರು ಕಾನೂನುಗಳು ಇದ್ದರೂ ಸರಿಯಾಗಿ ಅನುಷ್ಠಾನಗೊಳ್ಳದ ಕಾರಣ ದಿನದಿಂದ ದಿನಕ್ಕೆ ಪರಿಸರ ನಾಶವಾಗುತ್ತಿದೆ ಎಂದು ವಿಷಾದಿಸಿದರು.
ಮನುಷ್ಯ ಸೇವಿಸುವ ಆಹಾರ ವಿಷಯುಕ್ತವಾಗುತ್ತಿದೆ. ಕುಡಿಯುವ ನೀರು, ಸೇವಿಸುವ ಗಾಳಿಯು ಸಹಾ ಮಲಿನದಿಂದ ಕೊಡಿದೆ. ಇದನ್ನು ಸೇವಿಸುವ ನಾವು ರೋಗದಿಂದ ನರಳುತಿದ್ದೆೀವೆ. ಪರಿಸರ ಹಾಳು ಮಾಡುತ್ತಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ಇದ್ದರೂ ಸಹ ಪಾಲಿಸುತ್ತಿಲ್ಲ ಎಂದು ವಿಷಾದಿಸಿದರು.
ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ. ವೀರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಸದಾಶಿವ ಎಸ್. ಸುಲ್ತಾನಪುರಿ, ನಗರಸಭೆ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಮಾರಸ್ವಾಮಿ, ವಕೀಲರ ಸಂಘದ ಉಪಾಧ್ಯಕ್ಷ ಎಂ. ವಿಜಯಕುಮಾರ್, ಕಾರ್ಯದರ್ಶಿ ಟಿ. ಹನುಮಂತಪ್ಪ, ಸಂಸ್ಥೆ ಆಡಳಿತಾಧಿಕಾರಿ ಪ್ರೊ.ಡಿ.ಎಚ್. ಗುರುಮೂರ್ತಿ ಇತರರು ಹಾಜರಿದ್ದರು.
ಮುಕ್ತ ನಾಗರಾಜ್ ಪ್ರಾರ್ಥಿಸಿದರು. ಭಾಗ್ಯರತ್ನ ಸ್ವಾಗತಿಸಿದರು. ಚಂದ್ರಪ್ಪ ಮತ್ತು ಸತೀಶ್ ಜಟ್ಟಿ ಪರಿಸರ ಗೀತೆಗಳನ್ನು ಹಾಡಿದರು.
ಹಸಿರಿನ ಪ್ರಮಾಣ ಹಾಳು
ಪ್ರಸ್ತುತ ದಿನಗಳಲ್ಲಿ ಪರಿಸರ ಸಾಕಷ್ಟು ಹಾಳಾಗಿದ್ದು, ಹಸಿರಿನ ಪ್ರಮಾಣ ಗಣನೀಯ ಕಡಿಮೆಯಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್. ಜಯರಾಂ ವಿಷಾದ ವ್ಯಕ್ತಪಡಿಸಿದರು.ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಹಾಗೂ ಬಯಲುಸೀಮೆ ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ಆಶ್ರಯದಲ್ಲಿ ಮಂಗಳವಾರ ನಗರದ ವಿಪಿ ಬಡಾವಣೆಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರಿಸರ ಹಾನಿಯಿಂದ ಶುದ್ಧ ಗಾಳಿ, ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಮೊದಲು ಸಾಕಷ್ಟು ಗಿಡ ಮರಗಳಿದ್ದು, ಜನರು ದೀರ್ಘ ಆಯುಷಿಗಳಾಗಿ ಬದುಕುತ್ತಿದ್ದರು. ಪ್ರಸ್ತುತ ವಾತಾವರಣ ಸಾಕಷ್ಟು ಕಲುಷಿತಗೊಂಡಿದ್ದು ಮನುಷ್ಯನ ಆಯಸ್ಸು ಕಡಿಮೆಯಾಗುತ್ತಿದೆ. ಮನುಷ್ಯ ಪ್ರಕೃತಿಯ ಮೇಲೆ ನಿರಂತರ ಅತ್ಯಾಚಾರ ಹಾಗೂ ದೌರ್ಜನ್ಯವೇ ಇಂದಿನ ಈ ಪರಿಸ್ಥಿತಿಗೆ ಕಾರಣ ಎಂದು ಹೇಳಿದರು.
ಪರಿಸರ ಜಾಗೃತಿ ಕಾರ್ಯಕ್ರಮ ಕೇವಲ ಪ್ರಚಾರಕ್ಕಾಗಿ ಮಾಡದೇ ಅದರ ಉದ್ದೇಶ ಅನುಷ್ಠಾನಗೊಳಿಸುವ ಕಾರ್ಯವಾಗಬೇಕಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಕಾರ್ಯಕ್ರಮ ತೋರಿಕೆಯಾಗಿವೆ. ಕಾರ್ಯಕ್ರಮ ನಂತರ ಅದರ ಉದ್ದೇಶಗಳನ್ನು ಮರೆತುಬಿಡಲಾಗುತ್ತಿದೆ. ಆದರೆ, ಪರಿಸರ ಕಾರ್ಯಕ್ರಮ ಆ ರೀತಿಯ ಕಾರ್ಯಕ್ರಮ ಆಗದಂತೆ ನೋಡಿಕೊಳ್ಳಬೇಕಿದೆ ಎಂದರು.
ನಗರಸಭೆ ಆಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಮಾರುತಿ ಮೋಹನ್, ಶಿವು ಯಾದವ್, ಮಹಡಿ ಶಿವಮೂರ್ತಿ, ರವಿಶಂಕರಬಾಬು, ಶ್ರಿನಿವಾಸ್, ಬಿ.ಟಿ. ಜಗದೀಶ್, ಮರುಳಾರಾಧ್ಯ, ಕೃಷ್ಣಮೂರ್ತಿ, ಪ್ರತಾಪ್ ಜೋಗಿ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪರಿಸರ ದಿನಾಚರಣೆ ಅಂಗವಾಗಿ ಅರಳಿಕಟ್ಟೆ, ನಾಗರಕಟ್ಟೆ ಪ್ರದೇಶ ಸ್ವಚ್ಛಗೊಳಿಸುವ ಜಾಗೃತಿ ಮೂಡಿಸಿದರು ಹಾಗೂ ಶಾಲಾ ವಿದ್ಯಾರ್ಥಿಗಳು ಜೆಸಿಆರ್ ಬಡಾವಣೆಯಲ್ಲಿ ಜಾಥಾ ನಡೆಸಲಾಯಿತು.
ಮೊಳಕಾಲ್ಮುರು ವರದಿ
ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಕೊಡುಗೆಯಾಗಿ ನೀಡುವ ಅಗತ್ಯವಿದೆ ಎಂದು ನ್ಯಾಯಾಧೀಶ ಮಹಮದ್ ಇಮ್ತಿಯಾಜ್ ಅಹಮದ್ ಹೇಳಿದರು.ಇಲ್ಲಿನ ಪ್ರಥಮದರ್ಜೆ ನ್ಯಾಯಾಲಯ ಆವರಣದಲ್ಲಿ ಮಂಗಳವಾರ ತಾಲ್ಲೂಕು ವಕೀಲರ ಸಂಘ, ತಾಲ್ಲೂಕು ಕಾನೂನು ನೆರವು ಸಮಿತಿ ಮತ್ತು ಸಾಮಾಜಿಕ ಅರಣ್ಯ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅನೇಕ ಮಾರಕ ಪರಿಣಾಮಗಳನ್ನು ಇಂದು ಅನುಭವಿಸುತ್ತಿದ್ದೇವೆ. ಇದನ್ನು ತಪ್ಪಿಸಲು ಸಮಾಜದಲ್ಲಿ ಪರಿಸರ ಮಹತ್ವ ಕುರಿತು ಜಾಗೃತಿ ಮೂಡಿಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಎಂದರು.
ವಕೀಲ ವಿ.ಡಿ. ರಾಘವೇಂದ್ರ `ಪರಿಸರ ಮಹತ್ವ~ ಕುರಿತು ಮಾತನಾಡಿದರು.ವಕೀಲರ ಸಂಘದ ತಾಲ್ಲೂಕು ಅಧ್ಯಕ್ಷ ಆರ್.ಎಂ. ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಶಿವರುದ್ರಪ್ಪ, ಸಾಮಾಜಿಕ ಅರಣ್ಯಾಧಿಕಾರಿ ಮಲ್ಲೇಶಪ್ಪ ಇದ್ದರು.ವಕೀಲರ ಸಂಘದ ಮಂಜುನಾಥ್ ಸ್ವಾಗತಿಸಿದರು, ಎಂ.ಎನ್. ವಿಜಯಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು, ಚಂದ್ರಶೇಖರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.