ಬೆಂಗಳೂರು: `ಪರಿಸರವನ್ನು ನಾಶ ಮಾಡುವ ಮೂರ್ತಿಗಳ ಪೂಜೆಗಿಂತ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪೂಜಿಸುವುದು ಉತ್ತಮ' ಎಂದು ಪರಿಸರವಾದಿ ಅ.ನ. ಯಲ್ಲಪ್ಪ ರೆಡ್ಡಿ ಹೇಳಿದರು.
ಪರಿಸರ ಪ್ರಜ್ಞಾ ಇಕೊ ಕ್ಲಬ್ ಸೋಮವಾರ ರಾಜಾಜಿನಗರದ ವಿವೇಕಾನಂದ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ `ಪರಿಸರ ಸ್ನೇಹಿ ಗಣೇಶ ಸಪ್ತಾಹ ಜಾಥಾ' ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಶಾಸ್ತ್ರಗಳಲ್ಲಿ ವಿಗ್ರಹಗಳ ಬಗ್ಗೆ ವಿವರಣೆಯಿದೆ. ಆದರೆ, ವಿಗ್ರಹಗಳನ್ನು ಯಾವುದರಿಂದ ತಯಾರಿಸಬೇಕು ಎಂಬುದರ ಬಗ್ಗೆ ವಿವರಣೆಯಿಲ್ಲ. ಆದರೆ, ಇಂದಿನ ವೈಜ್ಞಾನಿಕ ಯುಗದಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡದ ಮೂರ್ತಿಗಳನ್ನು ಪೂಜಿಸಬೇಕು' ಎಂದು ಅವರು ಅಭಿಪ್ರಾಯಪಟ್ಟರು.
`ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಬರೀ ಆಕರ್ಷಣೆಗಾಗಿ ಬಣ್ಣದ ಗಣಪತಿ ಮೂರ್ತಿಗಳನ್ನು ಪೂಜಿಸುವುದರ ಬದಲು ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ಪೂಜಿಸಲು ಪಣ ತೊಡಬೇಕು' ಎಂದರು.
ರಾಜಾಜಿನಗರದಾದ್ಯಂತ ವಿದ್ಯಾರ್ಥಿಗಳು ಬ್ಯಾನರ್ ಹಿಡಿದು ಘೋಷಣೆಗಳನ್ನು ಕೂಗುತ್ತ ಜಾಥಾ ನಡೆಸಿದರು.