ಹೊಸಪೇಟೆ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾನಿಲಯ ನವೆಂಬರ್ನಲ್ಲಿ ನಡೆಸುವ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಕುರಿತು ಗುರುವಾರ ಹೊಸಪೇಟೆ ತಹಸೀಲ್ದಾರರ ಮೂಲಕ ಸಲ್ಲಿಸಿದ ಮನವಿಯಲ್ಲಿ 15ದಿನಗಳ ಕಾಲ ಅತಿಥಿ ಉಪನ್ಯಾಸಕರು ಧರಣಿ ನಡೆಸಿ ಬೋಧನೆಯಿಂದ ಹೊರಗುಳಿದಿರು ವುದು ಮತ್ತು ಕೆಲ ದಿನಗಳ ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ಅನೇಕ ಹಂತದ ತರಗತಿಗಳು ಪಠ್ಯಬೋಧನೆಯನ್ನು ಪೂರ್ಣಗೊಳಿಸಿರುವುದಿಲ್ಲಾ ನೂರಕ್ಕೆ 75 ರಷ್ಟು ಕಾಲೇಜುಗಳು ಇನ್ನು ತಮ್ಮ ಪಠ್ಯಕ್ರಮವನ್ನು ಪೂರ್ಣಗೊಳಿಸಿಲ್ಲ.
ಆದ್ದರಿಂದ ಈ ಹಿಂದಿನಂತೆಯೇ ಡಿಸೆಂಬರ್ನಲ್ಲಿ ಪರೀಕ್ಷೆ ನಡೆಸಬೇಕು ಇದರಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧಗೊಳ್ಳಲು ಹಾಗೂ ಉತ್ತಮ ಅಂಕ ಗಳಿಸಲು ಸಹಕಾರವಾಗಲಿದೆ ಎಂದು ಕುಲಪತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸುರೇಶ ಚೌವಾಣ್, ಶರತ್ಕುಮಾರ, ಪಂಪಾನಂದ, ವಿಜಯಲಕ್ಷ್ಮಿ, ಷರೀಫ್, ನಾಗರಾಜ, ಕೋರಿ ಶರಣ ಸೇರಿದಂತೆ ಇತರರು ಹಾಜರಿದ್ದರು.
ಲಂಚ ಆರೋಪ: ಗ್ರಾಮಸ್ಥರ ಪ್ರತಿಭಟನೆ
ಸಂಡೂರು: ತಾಲ್ಲೂಕಿನ ಕಾಳಿಂಗೇರಿ ಗ್ರಾ.ಪಂ. ವ್ಯಾಪ್ತಿಯ ಹಿರಾಳು ಗ್ರಾಮದ ಕೆಲವರು ಇಂದಿರಾ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಹಣ ಬಿಡುಗಡೆಗಾಗಿ ಗ್ರಾ.ಪಂ.ನ ಕೆಲ ಅಧಿಕಾರಿಗಳು ಲಂಚ ಪಡೆದು ಕೊಳ್ಳುತ್ತಿದ್ದಾರೆಂದು ಗುರುವಾರ ಪಟ್ಟಣದ ಎಸ್ಬಿಐ ಬಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕೊಟ್ರಮ್ಮ, ಜೈತುಂಬಿ ಮತ್ತು ಮುನ್ನಿ ಅವರ ಹೆಸರಿನಲ್ಲಿ ಇಂದಿರಾ ಆವಾಸ್ ಮನೆಗಳು ಮಂಜೂರಾಗಿದ್ದು, ಮೊದಲನೇ ಕಂತಿನ ರೂ.25 ಸಾವಿರ ರೂಪಾಯಿಗಳಲ್ಲಿ ರೂ.5 ಸಾವಿರ ಮತ್ತು ಎರಡನೇ ಕಂತಿನ ರೂ.12,500ಕ್ಕೆ ರೂ.2,500 ಲಂಚ ತೆಗೆದು ಕೊಂಡಿದ್ದಾರೆ ಎಂದು ಫಲಾನುಭವಿಗಳು ದೂರಿದರು.
ಪ್ರಕರಣದಲ್ಲಿ ಶಾಮೀಲಾಗಿರುವ ಬಿಲ್ ಕಲೆಕ್ಟರ್ ಖಾದರ್ ಬಾಷಾ ಮತ್ತು ಕಾರ್ಯದರ್ಶಿ ಕುಮಾರ ಸ್ವಾಮಿ ಬಹಳಷ್ಟು ಜನರಿಗೆ ಮೋಸ ಮಾಡಿದ್ದಾರೆ. ಗ್ರಾ.ಪಂ. ಅಧ್ಯಕ್ಷರ ಕೈವಾಡ ಈ ಪ್ರಕರಣದಲ್ಲಿದೆ ಎಂದು ಆರೋಪಿಸಿದರು.
ಈ ಬಗ್ಗೆ ಶೀಘ್ರವಾಗಿ ನೋಡಲ್ ಅಧಿಕಾರಿಯಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳು ವುದಾಗಿ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಪ್ರಸಾದ್ `ಪ್ರಜಾವಾಣಿ~ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.