ಮಾಯಕೊಂಡ: ಪರೋಪಕಾರದಲ್ಲಿ ತೊಡಗಿಕೊಂಡು ಬದುಕು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಶಿವಮೂರ್ತಿ ಮುರುಘಾ ಶರಣರು ಕರೆ ನೀಡಿದರು.
ಇಲ್ಲಿ ಭಾನುವಾರ ನಡೆದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿದ್ದಲಿಂಗಪ್ಪ ಅವರ ಶ್ರದ್ಧಾಂಜಲಿ ಮತ್ತು ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮೀಜಿಗಳು ಹೆಚ್ಚೆಂದರೆ ಚುನಾವಣಾ ಟಿಕೆಟ್ ಕೊಡಿಸಬಹುದು ಆದರೆ, ಯಾರಿಗೂ ಪುನರ್ಜನ್ಮ ಕೊಡಲಾಗದು. ಪರೋಪಕಾರಿಗೆ ಸಾವಿದೆ ಹೊರತು ಪರೋಪಕಾರಕ್ಕೆ ಸಾವಿಲ್ಲ ಎಂದರು.
ಹೊಸದುರ್ಗ ಶಾಖಾ ಮಠದ ಈಶ್ವರಾನಂದ ಪುರಿ ಸ್ವಾಮೀಜಿ ಮಾತನಾಡಿ, ಜನ ಹಣ ಪಡೆದು ಮತ ನೀಡಿ ಚುನಾವಣೆಯಲ್ಲಿ ಗೆಲ್ಲಿಸಿದವರು ಇಂದು ಜೈಲಿನಲ್ಲಿ ಇದ್ದಾರೆ. ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪ ಅವರಿಗೆ ಸಮಾಧಿಗೂ ಸ್ವಂತ ಸ್ಥಳವಿರಲಿಲ್ಲ. ಆದರೆ, ಇಂದು ಹಣ ಮಾಡುವುದೇ ರಾಜಕಾರಣಿಗಳ ಕಸುಬಾಗಿದೆ ಎಂದು ವಿಷಾದಿಸಿದರು.
ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿದರು.
ಶಾಸಕ ಶಾಮನೂರು ಶಿವಶಂಕರಪ್ಪ, ಬಸವರಾಜ ನಾಯ್ಕ, ಮಾಜಿ ಪುರಸಭಾಧ್ಯಕ್ಷ ಎಸ್. ನೀಲಪ್ಪ, ಕಾಂಗ್ರೆಸ್ ಮುಖಂಡ ಡಿ. ಬಸವರಾಜ್ ಮತ್ತಿತರರು ಮಾತನಾಡಿ, ಸಿದ್ದಲಿಂಗಪ್ಪ ಅವರ ಬದುಕು ಮತ್ತು ರಾಜಕೀಯ ಮುತ್ಸದ್ದಿತನವನ್ನು ಶ್ಲಾಘಿಸಿದರು.
ಹೆಬ್ಬಾಳು ಮಹಾಂತ ರುದ್ರೇಶ್ವರ ಶ್ರೀಗಳು ಮತ್ತು ಹದಡಿ ಚಂದ್ರಗಿರಿ ಶ್ರೀಗಳು ಆಶೀರ್ವಚನ ನೀಡಿದರು.
ಪತ್ರಕರ್ತ ನಾಗಣ್ಣ, ಜಿ.ಪಂ. ಉಪಾಧ್ಯಕ್ಷ ಮುಕುಂದಪ್ಪ, ಸದಸ್ಯೆ ಶಾರದಾ ಉಮೇಶನಾಯ್ಕ, ತಾ.ಪಂ. ಸದಸ್ಯರಾದ ಸುರೇಂದ್ರಪ್ಪ, ಫಾಲಾಕ್ಷಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಜಬ್ಬಾರ್, ಎಪಿಎಂಸಿ ಸದಸ್ಯ ರಾಜೇಂದ್ರ, ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, 22ಕೆರೆ ಹೋರಾಟ ಸಮಿತಿ ಅಧ್ಯಕ್ಷ ಮಂಜುನಾಥ್ ಗೌಡ, ಉಪಾಧ್ಯಕ್ಷ ಕರಿಬಸಪ್ಪ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮುರಿಗೇಂದ್ರಪ್ಪ ಇದ್ದರು.
ರಂಗಸ್ವಾಮಿ ಸ್ವಾಗತಿಸಿದರು. ಲಕ್ಷ್ಮೀದೇವಿ ಪ್ರಾಸ್ತಾವಿಕ ಮಾತನಾಡಿದರು. ತಿಪ್ಪೇಸ್ವಾಮಿ ನಿರೂಪಿಸಿದರು. ಉಮಾಶಂಕರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.