ಸಂಕೇಶ್ವರ: ಸಾಂಪ್ರದಾಯಿಕವಲ್ಲದ ಪರ್ಯಾಯ ಇಂಧನ ಮೂಲಗಳನ್ನು ಸರಿಯಾಗಿ ಸದ್ಬಳಕೆ ಮಾಡಬೇಕು. ಪರ್ಯಾಯ ಇಂಧನ ಮೂಲಗಳನ್ನು ಬಳಸಲು ಮೊದಲ ಆದ್ಯತೆ ನೀಡುವ ಅಗತ್ಯವಿದೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ದೇವಾನಂದ ಗಾಂವಕರ ಅಭಿಪ್ರಾಯಪಟ್ಟರು.
ಇಲ್ಲಿಯ ಶಿವರುದ್ರೇಶ್ವರ ಕಲಾ ಮತ್ತು ಪಟ್ಟಣ ಪಂಚಾಯಿತಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಯು.ಜಿ.ಸಿ. ಪ್ರಾಯೋಜಿತ ~ಇಂಧನ- ಸಮಸ್ಯೆ ಮತ್ತು ಪರಿಹಾರ~ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಈ ಸಂಬಂಧ ಅರಿವು ಮೂಡಿಸಲು ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಅವರು ನುಡಿದರು.
ಜನಸಂಖ್ಯೆ ಹೆಚ್ಚಿದಂತೆ ಇಂಧನ ಬಳಕೆಯು ಹೆಚ್ಚಾಗುತ್ತಿದೆ. ಕಲ್ಲಿದ್ದಲು, ಪೆಟ್ರೋಲ್ ಹಾಗೂ ನೈಸರ್ಗಿಕ ಇಂಧನದ ನಿರಂತರ ಬಳಕೆಯಿಂದ ವಿಶ್ವದ ಇಂಧನದ ಖನಿಜವೂ ಖಾಲಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಪರ್ಯಾಯ ಇಂಧನದ ಬಳಕೆ ಕುರಿತು ಆಲೋಚಿಸಬೇಕು. ಸೌರ ವಿದ್ಯುತ್, ಗಾಳಿ ವಿದ್ಯುತ್, ಉಷ್ಣಬುಗ್ಗೆ, ಬಯೋಗ್ಯಾಸ್, ಬಯೋಡಿಸೇಲ್ ಬಳಕೆ ಕುರಿತು ನಾವೆಲ್ಲ ಚಿಂತನೆ ನಡೆಸಬೇಕು ಎಂದು ಅವರು ಹೇಳಿದರು.
ಡಾ. ಪಿ.ಎಸ್. ಹಲ್ಯಾಳ ಮಾತನಾಡಿ, ಯುವಕರು ವೃತ್ತಿ ಕೌಶಲ ವೃದ್ಧಿಸಿಕೊಳ್ಳಲು ರೂಡಸೆಟ್ನಂಥ ಸಂಸ್ಥೆಗಳ ನೆರವು ಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎ.ಬಿ. ಪಾಟೀಲ, ವಿದ್ಯುತ್ ವಿತರಣಾ ಹಂತದಲ್ಲಿಯೇ ಶೇ 38ರಷ್ಟು ಪೋಲಾಗುತ್ತಿದೆ ಎಂದು ಹೇಳಿದರು. ಈ ಕುರಿತು ಪ್ರತಿಯೊಬ್ಬರೂ ಗಮನಹರಿಸುವ ಅಗತ್ಯವಿದೆ ಎಂದರು.
ಜಿ.ಎಸ್.ಇಂಡಿ, ದಯಾನಂದ ಕೇಸ್ತಿ, ಜಿ.ಡಿ. ಗಡೇಕಾಯಿ, ಡಾ.ಎಸ್.ಆರ್. ದೇಸಾಯಿ ಉಪಸ್ಥಿತರಿದ್ದರು. ಪ್ರಾ.ಎಸ್.ಎಸ್. ಪಾಟೀಲ ಸ್ವಾಗತಿಸಿದರು. ಪ್ರೊ.ಬಿ.ಜಿ.ಪಾಟೀಲ ನಿರೂಪಿಸಿದರು. ಡಾ.ಪಿ.ಆರ್. ಹೀರೆಮಠ ವಂದಿಸಿದರು.