ಹಾಸನ: `ಕಾಡನ್ನು ಉಳಿಸಿಕೊಂಡೇ ನಾಡನ್ನು ಅಭಿವೃದ್ಧಿಪಡಿಸುವತ್ತ ಗಮನ ಕೊಡಬೇಕಾಗಿದ್ದು, ಈ ನಿಟ್ಟಿನಲ್ಲಿ ಪರ್ಯಾಯ ಇಂಧನಗಳತ್ತ ಮುಖ ಮಾಡುವುದು ಅನಿವಾರ್ಯ~ ಎಂದು ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಹೇಳಿದರು.
ರಾಜೀವ್ ಗಾಂಧಿ ಅಕ್ಷಯ ಊರ್ಜಾ ದಿನಾಚರಣೆ ಅಂಗವಾಗಿ ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಹಪಠ್ಯ ಚುಟವಟಿಕೆ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
~ಸೌರಶಕ್ತಿ, ಪವನ ಶಕ್ತಿಯಂಥ ಪರ್ಯಾಯ ಇಂಧನ ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವತ್ತ ಎಲ್ಲರೂ ಗಮನ ಹರಿಸಬೇಕು ಎಂದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಜಗದೀಶ್ ಮಾತನಾಡಿ, ನಿತ್ಯ ಇಂಧನಕ್ಕಾಗಿ ಕಲ್ಲಿದ್ದಲು, ಸೌದೆ, ಡೀಸೆಲ್, ಪೆಟ್ರೋಲ್, ಸೀಮೆಎಣ್ಣೆ ಮುಂತಾದವುಗಳ ಬಳಕೆಗೆ ಅಪಾಯ ಹಣ ವ್ಯಯಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೌರಶಕ್ತಿ, ಜೈವಿಕ ಇಂಧನ, ಪವನಶಕ್ತಿಗಳತ್ತ ಜನರು ಗಮನ ಹರಿಸಬೇಕಾಗಿದೆ~ ಎಂದರು.
ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಾಮರಾಜ್ ಕಾರ್ಯಕ್ರಮದ ರೂಪುರೇಷೆ ವಿವರಿಸಿದರು. ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರಾಮೇಗೌಡ, ಶಿಕ್ಷಣ ಇಲಾಖೆ ಅಧಿಕಾರಿ ಲತಾ ಇತರರು ಇದ್ದರು. ಶಿಕ್ಷಣ ಇಲಾಖೆಯ ವೇದಾವತಿ ಸ್ವಾಗತಿಸಿ, ಭಾನುಮತಿ ವಂದಿಸಿದರು.