ಬೆಳಗಾವಿ: ಜೈನ ಧರ್ಮದ ಬಾಂಧವರಿಂದ ಆಚರಿಸಲಾಗುವ ಪರ್ಯೂಷಣ ಮತ್ತು ದಶಲಕ್ಷಣ ಪರ್ವ ಮುಕ್ತಾಯಗೊಂಡಿದ್ದು, ಈ ನಿಮಿತ್ಯ ಗುರುವಾರ ಪಲ್ಲಕ್ಕಿ ಉತ್ಸವ ನಡೆಯಿತು.
ನಗರದ ಮಠ ಬೀದಿಯಲ್ಲಿರುವ ಭಗವಾನ್ ಪಾರ್ಶ್ವನಾಥ ದಿಗಂಬರ ಜೈನ ಮಂದಿರದಿಂದ ಪಲ್ಲಕ್ಕಿ ಉತ್ಸವ ಪ್ರಾರಂಭಗೊಂಡಿತು. ಮೆರವಣಿಗೆ ಕಲ್ಮಠ ರಸ್ತೆ, ಮಾರುತಿ ಗಲ್ಲಿ, ದೇಶಪಾಂಡೆ ಗಲ್ಲಿ ಮೂಲಕ ಬಸವಣಗಲ್ಲಿಯಲ್ಲಿರುವ ಭಗವಾನ್ ನೇಮಿನಾಥ ದಿಗಂಬರ ಜೈನ ಮಂದಿರಕ್ಕೆ ಆಗಮಿಸಿತು.
ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ 24 ತೀರ್ಥಂಕರರಿಗೆ ವಿಶೇಷ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ಮಹಾವೀರ ಜಯಂತಿಯ ದಿನದಂದು ನಡೆದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ತೀರ್ಥಂಕರರ ಪೂಜಾ ವಿಧಾನದ ಬಳಿಕ ಮೆರವಣಿಗೆಯು ಬಸವಣ ಗಲ್ಲಿ, ರಾಮಲಿಂಗಖಿಂಡ ಗಲ್ಲಿ, ಅನಂತಶಯನ ಗಲ್ಲಿ, ಕುಲಕರ್ಣಿ ಗಲ್ಲಿ, ಶೇರಿ ಗಲ್ಲಿ ಮೂಲಕ ಮಠ ಬೀದಿ ಮದಿರಕ್ಕೆ ತೆರಳಿ ಅಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆ ಸಂದರ್ಭದಲ್ಲಿ ಜೈನ ಬಾಂಧವರು ಪಲ್ಲಕ್ಕಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿದರು.