ಬೆಂಗಳೂರು: `ಕನ್ನಡದಲ್ಲಿ ನಾಟಕಕಾರರ ಪಟ್ಟಿಯಲ್ಲಿ ಪರ್ವತವಾಣಿ ಅವರ ಹೆಸರೇ ಇಲ್ಲ. ವಿಮರ್ಶಕರು ನಾಲ್ಕೈದು ಮಂದಿ ನಾಟಕಕಾರರ ಹೆಸರನ್ನು ಹೆಸರಿಸುತ್ತಾರೆ. ಅಲ್ಲಿಯೂ ಪರ್ವತವಾಣಿ ಅವರನ್ನು ನೆನಪಿಸಿಕೊಳ್ಳುವುದಿಲ್ಲ~ ಎಂದು ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ವಿಷಾದಿಸಿದರು.
ನಟ, ನಾಟಕಕಾರ, ನಿರ್ದೇಶಕ ಪರ್ವತವಾಣಿ ಅವರ ಜನ್ಮಶತಮಾನೋತ್ಸವದ ಅಂಗವಾಗಿ ಕರ್ನಾಟಕ ನಾಟಕ ಅಕಾಡೆಮಿಯು ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಾಟಕೋತ್ಸವದಲ್ಲಿ ಮಾತನಾಡಿದ ಅವರು, `ಕನ್ನಡ ನಾಟಕಗಳ ಚರಿತ್ರೆಯ ಬಗ್ಗೆ ಯಾರಾದರೂ ಕೃತಿ ರಚನೆ ಮಾಡುವದಾದರೆ ಅದರಲ್ಲಿ ಒಂದು ಅಧ್ಯಾಯವನ್ನೇ ಪರ್ವತವಾಣಿ ಅವರು ರಂಗಭೂಮಿಗೆ ಸಲ್ಲಿಸಿರುವ ಸೇವೆಯ ಬಗ್ಗೆ ಚರ್ಚಿಸಬೇಕಾಗುತ್ತದೆ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಓದುತ್ತಿರುವಾಗ ಪರ್ವತವಾಣಿ ನನ್ನ ಒಡನಾಡಿಯಾಗಿದ್ದರು.
ಅವರೊಂದಿಗೆ ಮಾತನಾಡುವುದೆಂದರೆ ವಿದ್ವಾಂಸರೊಂದಿಗೆ ಮಾತನಾಡಿದಂತಾಗುತ್ತಿತ್ತು~ ಎಂದರು.
ಹಿರಿಯ ವಿಮರ್ಶಕ ಪ್ರೊ.ಎಲ್.ಎಸ್.ಶೇಷಗಿರಿರಾವ್ ಮಾತನಾಡಿ, `ಪರ್ವತವಾಣಿ ಅವರು ಕನ್ನಡ ನಾಟಕಕಗಳಿಗೆ ಲವಲವಿಕೆ, ಚೈತನ್ಯವನ್ನು ತಂದುಕೊಟ್ಟವರು. ಆಗಷ್ಟೇ ಆರಂಭವಾಗಿದ್ದ ಸಿನಿಮಾ ಸವಾಲನ್ನು ಎದುರಿಸಿ ರಂಗಭೂಮಿಯ ಅಸ್ತಿತ್ವವನ್ನು ಉಳಿಸಿದರು~ ಎಂದರು.
ಹಿರಿಯ ಆಕಾಶವಾಣಿ ರಂಗ ಕಲಾವಿದೆ ಯಮುನಾ ಮೂರ್ತಿ, ಚಿತ್ರನಟ ಶ್ರೀನಾಥ್ ಪರ್ವತವಾಣಿ ಅವರೊಂದಿಗಿನ ತಮ್ಮ ಅನುಭವಗಳನ್ನು ಸ್ಮರಿಸಿದರು. ಗ್ರೀನ್ ರೂಂ ತಂಡ ಅಭಿನಯಿಸಿದ, ಪರ್ವತವಾಣಿ ಅವರ `ಉಂಡಾಡಿ ಗುಂಡ~ ನಾಟಕ ಪ್ರದರ್ಶಿಸಲಾಯಿತು.