ಬೆಂಗಳೂರು: ಹೈದರಾಬಾದ್ ಮೂಲದ `ಪವರಾನಿಕ್ಸ್~ ಎಂಬ ಕಂಪೆನಿಗೆ ರಾಜ್ಯದ ಇಂಧನ ಇಲಾಖೆಯಿಂದ ಪಾವತಿಯಾಗಬೇಕಿದ್ದ ಬಾಕಿ ಹಣ 17 ಕೋಟಿ ರೂಪಾಯಿ ಕೊಡಿಸುತ್ತೇವೆ ಎಂದು ಹೇಳಿ ಕಮಿಷನ್ ಪಡೆಯಲೆತ್ನಿಸಿದ್ದ ಪ್ರಕರಣದಲ್ಲಿ ಖಾಸಗಿ ವಾಹಿನಿಯ ವ್ಯವಸ್ಥಾಪಕ ಮನೋಜ್ ಅವರ ಪಾತ್ರವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
`ಪ್ರಜಾವಾಣಿ~ಯ ಜೂ.5ರ ಸಂಚಿಕೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೋಜ್ ಅವರನ್ನು ಬಂಧಿಸಲಾಗಿದೆ ಎಂದು ತಪ್ಪಾಗಿ ವರದಿಯಾಗಿತ್ತು. ಆದರೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೋಹನ್ ಎಂಬುವರನ್ನು ಬಂಧಿಸಿದ್ದಾರೆ.
ಮೋಹನ್ ವಿವಿಧ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಹೇಳಿಕೊಂಡು ಪವರಾನಿಕ್ಸ್ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ಅವರಿಂದ ಕಮಿಷನ್ ಪಡೆಯಲು ಯತ್ನಿಸಿದ್ದ. ಈ ಕಾರಣಕ್ಕಾಗಿ ಹಾಗೂ ಪ್ರಕರಣದ ಪ್ರಮುಖ ಆರೋಪಿ ನರಸಿಂಹ ಚೌಧರಿಗೆ ನೆರವು ನೀಡಿದ ಆರೋಪದ ಮೇಲೆ ಮೋಹನ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.