ನವದೆಹಲಿ (ಐಎಎನ್ಎಸ್): ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ~ಸರ್ಕಾರದ ಮಹಾನ್ ಆಸ್ತಿ~ ಎಂದು ಬಣ್ಣಸುವ ಮೂಲಕ ಎನ್ ಸಿಪಿ ಮುಖಂಡನನ್ನು ಮನವೊಲಿಸುವ ಯತ್ನ ಮಾಡಿದ್ದಾರೆ.
~ಶರದ್ ಪವಾರ್ ಅವರು ಅತ್ಯಂತ ಮೌಲ್ಯಯುತ ಸಹೋದ್ಯೋಗಿ. ಅವರ ಜ್ಞಾನ, ವಿವೇಕ, ಅನುಭವ ನಮ್ಮ ಸರ್ಕಾರಕ್ಕೆ ಮಹಾನ್ ಆಸ್ತಿ~ ಎಂದು ಪ್ರಧಾನಿ ನುಡಿದರು.
ಪವಾರ್ ಮತ್ತು ಬೃಹತ್ ಕೈಗಾರಿಕಾ ಸಚಿವ ಪ್ರಫುಲ್ ಪಟೇಲ್ ಅವರು ಗುರುವಾರ ಸಂಜೆ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯನ್ನು ಬಹಿಷ್ಕರಿಸಿದ್ದರು.
ಎನ್ ಸಿಪಿ ಮುಖ್ಯಸ್ಥನಿಗೆ ಸರ್ಕಾರದಲ್ಲಿ ದ್ವಿತೀಯ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕಾಗಿ ಉಭಯ ಧುರೀಣರೂ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದಾಗಿ ಪುಕಾರುಗಳು ಹರಡಿದ್ದವು.
ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರಕ್ಕೆ ತಾವು ರಾಜೀನಾಮೆ ನೀಡಿರುವುದಾಗಿ ಹರಡಿದ ಪುಕಾರುಗಳನ್ನು ಪ್ರಫುಲ್ ಪಟೇಲ್ ಶುಕ್ರವಾರ ನಿರಾಕರಿಸಿದ್ದರು.