ಬೆಂಗಳೂರು: ರಾಜ್ಯದ ಬೀದರ್, ಶಿವಮೊಗ್ಗ ಮತ್ತು ಹಾಸನ ಪಶುವೈದ್ಯಕೀಯ ಕಾಲೇಜುಗಳಲ್ಲಿ ಪ್ರಸಕ್ತ ವರ್ಷದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಭಾರತೀಯ ಪಶುವೈದ್ಯಕೀಯ ಪರಿಷತ್ ಮತ್ತು ಕೇಂದ್ರ ಸರ್ಕಾರ ಷರತ್ತುಬದ್ಧ ಒಪ್ಪಿಗೆ ನೀಡಿವೆ.
2014–15ನೇ ಸಾಲಿನ ಪ್ರವೇಶಾವಕಾಶಕ್ಕೆ ಮೊದಲು ಅಂದರೆ 2014ರ ಜೂನ್ 30ರ ಒಳಗೆ ಈ ಕಾಲೇಜುಗಳಲ್ಲಿ ಅಗತ್ಯವಿರುವ ಮೂಲಸೌಲಭ್ಯಗಳನ್ನು ಒದಗಿಸುವ ಷರತ್ತಿನೊಂದಿಗೆ ಒಪ್ಪಿಗೆ ಸೂಚಿಸಲಾಗಿದೆ. ಇದರಿಂದಾಗಿ ಈ ವರ್ಷದ ಆರಂಭದಿಂದ ನೆನೆಗುದಿಗೆ ಬಿದ್ದಿದ್ದ ವಿಷಯ ತಾತ್ಕಾಲಿಕವಾಗಿ ಇತ್ಯರ್ಥವಾಗಿದೆ.
ಒಂದು ವೇಳೆ ಕೊರತೆಗಳನ್ನು ನೀಗಿಸದಿದ್ದರೆ ಪ್ರಸಕ್ತ ಸಾಲಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳನ್ನು ಸಮೀಪದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಪ್ರವೇಶ ಕಲ್ಪಿಸುವ ಜವಾಬ್ದಾರಿಯನ್ನು ಆಯಾ ವಿ.ವಿ.ಗಳು ಮತ್ತು ರಾಜ್ಯ ಸರ್ಕಾರವೇ ತೆಗೆದುಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.