ಕೋಲಾರ: ರಾಜ್ಯದ ಹಲವು ಜಿಲ್ಲೆಗಳಲ್ಲಿ ನೂರಾರು ಜಾನುವಾರುಗಳು ಕಾಲುಬಾಯಿ ಜ್ವರದಿಂದ ಸಾವಿಗೀಡಾಗುತ್ತಿದ್ದರೂ ಅದನ್ನು ನಿಯಂತ್ರಿಸಲು ಸಾಧ್ಯವಾಗದ ಸನ್ನಿವೇಶ ಪಶುಪಾಲನೆ ಇಲಾಖೆಯಲ್ಲಿ ನಿರ್ಮಾಣವಾಗಿದೆ.
ಜ್ವರವನ್ನು ನಿಯಂತ್ರಿಸುವ ಸಲುವಾಗಿ ವರ್ಷಕ್ಕೆ ಎರಡು ಬಾರಿ ಉಚಿತವಾಗಿ ಲಸಿಕೆ ಹಾಕುವ ಕಾರ್ಯವು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣುತ್ತಿಲ್ಲ. ಇದಕ್ಕೆ ಲಸಿಕೆ ಹಾಕಿಸುವಲ್ಲಿ ರೈತರ ನಿರಾಸಕ್ತಿ ಒಂದು ಕಾರಣವಾದರೆ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಮತ್ತೊಂದು ಕಾರಣ.
ಇಲಾಖೆಯಲ್ಲಿ ಪ್ರಸ್ತುತ ಸುಮಾರು 800 ಪಶುವೈದ್ಯರ ಕೊರತೆ ಇರುವ ವೇಳೆಯಲ್ಲೇ ಹಲವು ಜಿಲ್ಲೆಗಳಲ್ಲಿ ಪಶುವೈದ್ಯಾಧಿಕಾರಿಗಳನ್ನು ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವ-ಹಣಾ-ಧಿಕಾರಿ ಪ್ರಭಾರ ಹುದ್ದೆಯೂ ಸೇರಿದಂತೆ ಹೆಚ್ಚುವರಿ ಪ್ರಭಾರ ಹುದ್ದೆಗಳಿಗೆ ನಿಯೋಜಿಸಲಾಗಿದೆ.
ಪಶುಪಾಲನೆ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಹೆಚ್ಚು ಆಸಕ್ತಿ ವಹಿಸಿ, ಪಶುಪಾಲನಾ ಇಲಾಖೆ ಕಾರ್ಯಕ್ರಮಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಹೀಗಾಗಿ ಅಂಥ ಜಿಲ್ಲೆಗಳಲ್ಲಿ 2012–--- 13ನೇ ಸಾಲಿನಲ್ಲಿ ಇಲಾಖೆ ವತಿಯಿಂದ ಕೈಗೊಂಡ ಲಸಿಕೆ ಕಾರ್ಯಕ್ರಮಗಳ ಶೇಕಡಾವಾರು ಪ್ರಗತಿ ಸಂಪೂರ್ಣ ಕಡಿಮೆ ಆಗಿದೆ.
ಪ್ರಸಕ್ತ ಸಾಲಿನಲ್ಲೂ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದರಿಂದ ಅಧಿಕಾರಿಗಳ ಸೇವೆ ಇಲಾಖೆಗೆ ಅತೀ ಅವಶ್ಯವಾಗಿದೆ. ಹೀಗಾಗಿ ಅಧಿಕಾರಿಗಳನ್ನು ಪ್ರಭಾರದಿಂದ ಕೂಡಲೇ ಮುಕ್ತಗೊಳಿಸಬೇಕು ಎಂದು ಪಶುಸಂಗೋಪನಾ ಮತ್ತು ಮೀನುಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ರಾಜ್ಯದ ಆರು ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ, ಮುಳಬಾಗಲು, ಚಾಮರಾಜನಗರದ ಕೊಳ್ಳೇಗಾಲ, ಬಿಜಾಪುರದ ಸಿಂಧಗಿ, ಹಾವೇರಿ, ರಾಯಚೂರಿನ ದೇವದುರ್ಗ, ಕೊಪ್ಪಳ ಜಿಲ್ಲೆಯ ಕುಷ್ಟಗಿ ಸೇರಿ 8 ತಾಲ್ಲೂಕುಗಳಲ್ಲಿ ಪಶುಪಾಲನೆ ಇಲಾಖೆ ಅಧಿಕಾರಿಗಳೇ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾಗಿದ್ದಾರೆ.
ಇಲಾಖೆ ಸಹಾಯಕ ನಿರ್ದೇಶಕರಾದ ಡಾ.ಜಗದೀಶ್, ಡಾ.ಸತೀಶಕುಮಾರ್, ಡಾ.ರಮಾನಂದ ಅವರನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ, ಶ್ರೀನಿವಾಸಪುರ ಮತ್ತು ಮುಳಬಾಗಲು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಭಾರ ಹುದ್ದೆಗೆ ನಿಯೋಜಿಸಲಾಗಿದೆ. ಬಿಜಾಪುರದ ಪಶುವೈದ್ಯಾಧಿಕಾರಿ ಡಾ.ಎಸ್.ಗಂಗನಹಹಳ್ಳಿ (ಸಿಂಧಗಿ ಕಾರ್ಯನಿರ್ವಹಣಾಧಿಕಾರಿ), ಹಾವೇರಿಯ ಪಶು ಆಸ್ಪತ್ರೆ ವಿಸ್ತರಣಾಧಿಕಾರಿ ಡಾ.ಚಂದ್ರಪ್ಪ ನರಸಗೊಂಡ (ಸಮಾಜ ಕಲ್ಯಾಣಾಧಿಕಾರಿ), ರಾಯಚೂರು ವಿಸ್ತರಣಾಧಿಕಾರಿ ಡಾ.-ಪೋಮ್ ಸಿಂಗ್ ಲಮಾಣಿ (ರಾಯಚೂರು ಕಾರ್ಯನಿರ್ವಹಣಾ-ಧಿಕಾರಿ), ದೇವದುರ್ಗದ ಸಹಾಯಕ ಡಾ.ರಾಮದೇವ ರಾಥೋಡ್ (ದೇವದುರ್ಗ ಕಾರ್ಯನಿರ್ವಹಣಾಧಿಕಾರಿ), ಕುಷ್ಟಗಿಯ ಸಹಾಯಕ ನಿರ್ದೇಶಕ ಡಾ.ಚಂದ್ರಕಾಂತ ಬಿ.ಮಾಗೇರಿ (ಕುಷ್ಟಗಿ ಕಾರ್ಯನಿರ್ವಹಣಾಧಿಕಾರಿ)ಯಾಗಿ ನಿಯೋಜಿಸಲಾಗಿದೆ. ಚಾಮರಾಜನಗರದ ಸಹಾಯಕ ನಿರ್ದೇಶಕ ಡಾ.ಪ್ರಕಾಶ್ ಅವರನ್ನು ಚಾಮರಾಜನಗರದ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಪ್ರಭಾರ ಜಿಲ್ಲಾ ಅಧಿಕಾರಿಯಾಗಿ ನಿಯೋಜಿಸಲಾಗಿದೆ.
ಅಭಿಪ್ರಾಯ ಪಡೆದಿಲ್ಲ: ಪಶುಪಾಲನೆ ಇಲಾಖೆ ಅಧಿಕಾರಿಗಳನ್ನು ಹೆಚ್ಚುವರಿ ಹುದ್ದೆ ಪ್ರಭಾರದಲ್ಲಿ ಇರಿಸುವ ಮುನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ-ಗಳು ಇಲಾಖೆ ಅಥವಾ ಸರ್ಕಾರದ ಅಭಿಪ್ರಾಯವನ್ನೂ ಪಡೆಯದಿರುವುದು ವಿಷಾದನೀಯ ಎಂದು ಪ್ರಧಾನ ಕಾರ್ಯದರ್ಶಿಗಳು ಸೆ.3ರಂದು ಬರೆದ ಪತ್ರದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಸುಮಾರು 800 ಪಶುವೈದ್ಯರ ಕೊರತೆ ಇರುವ ಹಿನ್ನೆಲೆಯಲ್ಲಿ ಈಗಾಗಲೇ ಇತರೆ ಇಲಾಖೆಗಳಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಸಿಬ್ಬಂದಿಯನ್ನು ಹಿಂಪಡೆಯಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಹೀಗಾಗಿ ಇಲಾಖೆಯ ಅಧಿಕಾರಿ–ಸಿಬ್ಬಂದಿಯನ್ನು ಹೆಚ್ಚುವರಿ ಪ್ರಭಾರದಲ್ಲಿ ಇರಿಸಬಾರದು. ಹೆಚ್ಚುವರಿ ಪ್ರಭಾರದಲ್ಲಿರುವ 6 ಜಿಲ್ಲೆಗಳ ಅಧಿಕಾರಿಗಳನ್ನು ಮತ್ತು ಇಲಾಖೆ ಗಮನಕ್ಕೆ ಬಾರದೆ ಇರುವ ಇನ್ನಿತರ ಅಧಿಕಾರಿಗಳನ್ನು ಪ್ರಭಾರದಿಂದ ಕೂಡಲೇ ಮುಕ್ತಗೊಳಿ-ಸಬೇಕು. ಇಲಾಖೆ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದು ಅವರು ಕೋರಿದ್ದಾರೆ.
ಕ್ರಮವಿಲ್ಲ: ಪ್ರಧಾನ ಕಾರ್ಯದರ್ಶಿ ಸೆ.3ರಂದೇ ಈ ಪತ್ರವನ್ನು ಬರೆದಿದ್ದರೂ ಜಿಲ್ಲೆಯ ಮೂವರು ಅಧಿಕಾರಿಗಳನ್ನು ಪ್ರಭಾರದಿಂದ ಮುಕ್ತಗೊಳಿಸದೆ ಮುಂದುವರಿಸಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಜಿಲ್ಲೆಯಲ್ಲಿ ಕಾಲುಬಾಯಿ ಜ್ವರದಿಂದ ಸಾವಿಗೀಡಾಗುವ ಜಾನುವಾರುಗಳ ಸಂಖ್ಯೆ ಹೆಚ್ಚಾಗಲಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.
ಪ್ರಭಾರ ಹುದ್ದೆಯಿಂದ ಬಿಡುಗಡೆ ಮಾಡುವ ಕುರಿತು ಇಲಾಖೆ ಆಯುಕ್ತರು ಈ ಕುರಿತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಬಂಗಾರಪೇಟೆ ಮತ್ತು ಶ್ರೀನಿವಾಸಪುರದ ಸಹಾಯಕ ನಿರ್ದೇಶಕರು ಪ್ರಭಾರದಿಂದ ಮುಕ್ತಗೊಳಿಸುವಂತೆ ಮನವಿಯನ್ನೂ ಮಾಡಿದ್ದಾರೆ.
ಮುಖ್ಯಮಂತ್ರಿಯವರ ಭೇಟಿ ಕಾರ್ಯಕ್ರಮದ ಬಳಿಕ ಕ್ರಮ ಕೈಗೊಳ್ಳುವುದಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರವಸೆ ನೀಡಿದ್ದಾರೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಬಿ.ಎನ್.ಶಿವರಾಂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.