ಶೃಂಗೇರಿ: ‘ಪಶ್ಚಿಮ ಘಟ್ಟ ಕಾಡುಗಳು ದೇಶದ ಅಮೂಲ್ಯ ಸಂಪತ್ತು. ಅಭಿವೃದ್ಧಿಗಾಗಿ ಈ ಕಾಡುಗಳು ನಾಶ ಹೊಂದುತ್ತಿವೆ’ ಎಂದು ಪಶ್ಚಿಮ ಘಟ್ಟ ಕೇಂದ್ರ ತಜ್ಞ ಸಮಿತಿ ಸದಸ್ಯೆ ವಿದ್ಯಾ ನಾಯಕ್ ತಿಳಿಸಿದರು.
ಜೆಸಿಬಿಎಂ ಕಾಲೇಜಿನಲ್ಲಿ ಸೋಮವಾರ ಸೂಕ್ಷ್ಮ ಪರಿಸರ ತಾಣಗಳ ಬಗ್ಗೆ ಏರ್ಪಡಿಸಲಾಗಿದ್ದ ವಿಶೇಷ ಸಂವಾದದಲ್ಲಿ ಅವರು ಮಾತನಾಡಿದರು.
ದಕ್ಷಿಣ ಕನ್ನಡದಲ್ಲಿ ಗೇರು ರೋಗ ನಿಯಂತ್ರಣಕ್ಕಾಗಿ ಎಂಡೋಸಲ್ಫಾನ್ ಸಿಂಪಡಿಸಲಾಯಿತು. ಇದರ ಪರಿಣಾಮ ಅಲ್ಲಿನ ಪರಿಸರದ ಮೇಲಾಗಿದೆ. ಪಶ್ಚಿಮ ಘಟ್ಟವನ್ನು ನಂಬಿ ಬದುಕುತ್ತಿರುವ ಸಹಸ್ರಾರು ಮೂಲನಿವಾಸಿಗಳ ಸಹಕಾರ ಪಡೆದು ಕಾಡುಗಳ ರಕ್ಷಣೆಗೆ ಮುಂದಾಗಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಜೆಸಿಬಿಎಂ ಕಾಲೇಜು ಪ್ರಾಚಾರ್ಯ ಡಾ.ಎಚ್.ಸಿ.ವೀರಪ್ಪ ಗೌಡ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದರು.
ಪಶ್ಚಿಮ ಘಟ್ಟ ಕಾರ್ಯಪಡೆಯ ಸದಸ್ಯ ಗಜೇಂದ್ರ ಗೊರಸುಕುಡಿಗೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆರೆಕಟ್ಟೆ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಕಂಬಳಿ, ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕುಮಾರಸ್ವಾಮಿ ಉಡುಪ ಇದ್ದರು.