ಬೆಂಗಳೂರು: ಡಾ.ಕೆ.ಕಸ್ತೂರಿರಂಗನ್ ನೇತೃತ್ವದ ಉನ್ನತಮಟ್ಟದ ಸಮಿತಿಯು ರಾಜ್ಯದ ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿ ಗುರುತಿಸಿರುವ ‘ಕೆಂಪುವರ್ಗ’ದ ಕೈಗಾರಿಕೆಗಳ ಕುರಿತು ಪರಿಶೀಲನೆ ನಡೆಸಿ ತೀರ್ಮಾನಕ್ಕೆ ಬರಲು ಪಶ್ಚಿಮಘಟ್ಟಕ್ಕೆ ಸಂಬಂಧಿಸಿದ ಸಚಿವ ಸಂಪುಟ ಉಪ ಸಮಿತಿ ನಿರ್ಧರಿಸಿದೆ.
ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಕಸ್ತೂರಿರಂಗನ್ ವರದಿ ಶಿಫಾರಸುಗಳ ಜಾರಿ ಕುರಿತು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಪ್ರತಿಕ್ರಿಯೆ ಸಿದ್ಧಪಡಿಸಲು ನೇಮಿಸಿರುವ ಅರಣ್ಯ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯ ಸಮಿತಿ ಗುರುವಾರ ವಿಧಾನಸೌಧದಲ್ಲಿ ಸಭೆ ನಡೆಸಿತು. ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ವಲಯದಲ್ಲಿ ಇರುವ ರಾಜ್ಯ ಸರ್ಕಾರದ ಒಡೆತನದ ‘ಕೆಂಪುವರ್ಗ’ದ ಕೈಗಾರಿಕೆಗಳ ಮೌಲ್ಯಮಾಪನ ನಡೆಸಲು ಈ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಅತಿಹೆಚ್ಚು ಮಾಲಿನ್ಯಕ್ಕೆ ಕಾರಣವಾಗುವ ಹಲವು ಕೈಗಾರಿಕೆಗಳನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ‘ಕೆಂಪುವರ್ಗ’ಕ್ಕೆ ಸೇರಿಸಿದೆ. ರಾಸಾಯನಿಕ ಕೈಗಾರಿಕೆಗಳು, ಕಾಗದ ಕಾರ್ಖಾನೆಗಳು, ರಸಗೊಬ್ಬರ ಕಾರ್ಖಾನೆಗಳು, ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳು, ತೈಲ ಶುದ್ಧೀಕರಣ ಘಟಕಗಳು, ಕೃಷಿ ಔಷಧಿ ತಯಾರಿಕೆ ಘಟಕಗಳು, ಪೆಟ್ರೋಲಿಯಂ ಸಂಬಂಧಿ ರಾಸಾಯನಿಕ ಕೈಗಾರಿಕೆಗಳು, ಔಷಧಿ ತಯಾರಿಕಾ ಘಟಕಗಳು ಈ ಪಟ್ಟಿಯಲ್ಲಿವೆ. ರಾಜ್ಯ ಸರ್ಕಾರದ ಒಡೆತನದ ಸುಮಾರು 100 ‘ಕೆಂಪುವರ್ಗ’ದ ಕಾರ್ಖಾನೆಗಳು ಪಶ್ಚಿಮಘಟ್ಟಗಳ ವ್ಯಾಪ್ತಿಯಲ್ಲಿವೆ.
ಕಾಫಿಬೀಜ ಸಂಸ್ಕರಣ (ಪಲ್ಪಿಂಗ್) ಘಟಕಗಳನ್ನೂ ಕಸ್ತೂರಿ ರಂಗನ್ ಸಮಿತಿ ‘ಕೆಂಪುವರ್ಗ’ಕ್ಕೆ ಸೇರಿಸಿದೆ. ಕೆಂಪುವರ್ಗದ ಎಲ್ಲ ಕೈಗಾರಿಕೆಗಳನ್ನು ಸ್ಥಗಿತಗೊಳಿಸಬೇಕು ಎಂಬ ಶಿಫಾರಸು ಈ ವರದಿಯಲ್ಲಿದೆ. ಆದರೆ, ಕಾಫಿ ಬೆಳೆಗಾರರ ಪ್ರತಿರೋಧ ಹೆಚ್ಚುತ್ತಿರುವ ಕಾರಣದಿಂದ, ಆ ಕೈಗಾರಿಕೆಗಳನ್ನು ಮುಚ್ಚುವ ಬದಲಿಗೆ, ಮೌಲ್ಯಮಾಪನ ನಡೆಸಿದ ಬಳಿಕ ನಿರ್ಧಾರಕ್ಕೆ ಬರಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂಬ ಬೇಡಿಕೆ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕೇಳಿಬರುತ್ತಿದೆ. ಮಡಿಕೇರಿಯಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲೂ ಈ ಒತ್ತಾಯ ಕೇಳಿಬಂದಿದೆ.
ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ಜನರ ಜೀವನಕ್ಕೆ ತೊಂದರೆ ಆಗದಂತೆ ವರದಿಯನ್ನು ಜಾರಿಗೊಳಿಸುವ ಯೋಚನೆ ಸರ್ಕಾರಕ್ಕೆ ಇದೆ. ಈ ಕಾರಣಕ್ಕಾಗಿಯೇ ದಿಢೀರನೆ ‘ಕೆಂಪುವರ್ಗ’ದ ಕೈಗಾರಿಕೆಗಳನ್ನು ಮುಚ್ಚುವ ಬದಲಿಗೆ, ಮೌಲ್ಯಮಾಪನ ನಡೆಸುವ ನಿರ್ಧಾರಕ್ಕೆ ಬಂದಿದೆ.
ಕೇಂದ್ರ ಸರ್ಕಾರ ನೇರವಾಗಿ ಅನುಮತಿ ನೀಡಿರುವ ಕಾರ್ಖಾನೆಗಳ ವಿಷಯದಲ್ಲಿ ರಾಜ್ಯಕ್ಕೆ ಯಾವುದೇ ಅಧಿಕಾರ ಇಲ್ಲ. ಅಂತಹ ಕಾರ್ಖಾನೆಗಳನ್ನು ಮುಚ್ಚಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಪರಿಸರಸೂಕ್ಷ್ಮ ಪ್ರದೇಶಗಳ ಸಂರಕ್ಷಣೆ ವಿಷಯದಲ್ಲಿ ವರದಿ ಜಾರಿಯ ಅಗತ್ಯ ಕುರಿತು ಗ್ರಾಮಗಳ ಹಂತದಲ್ಲಿ ಜಾಗೃತಿ ಮೂಡಿಸಲು ಸಮಿತಿ ನಿರ್ಧರಿಸಿದೆ. ಈ ಕಾರಣಕ್ಕಾಗಿ ವರದಿಯನ್ನು ಕನ್ನಡಕ್ಕೆ ಭಾಷಾಂತರ ಮಾಡಿ, ಮುದ್ರಿಸಿ ಹಂಚಲು ತೀರ್ಮಾನಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.