ನವದೆಹಲಿ (ಪಿಟಿಐ): ಕರ್ನಾಟಕ, ಕೇರಳ ಸೇರಿದಂತೆ ಆರು ರಾಜ್ಯಗಳಲ್ಲಿ ಮೈಚಾಚಿರುವ ಪಶ್ಚಿಮಘಟ್ಟದಲ್ಲಿ ತೋಟಗಾರಿಕೆ (ಪ್ಲ್ಯಾಂಟೇಷನ್) ಹಾಗೂ ಕೃಷಿ ಚಟುವಟಿಕೆಗಳಿಗೆ ಹೇರಿದ್ದ ನಿರ್ಬಂಧವನ್ನು ಕೇಂದ್ರ ಪರಿಸರ ಸಚಿವಾಲಯ ಶುಕ್ರವಾರ ವಾಪಸ್ ತೆಗೆದುಕೊಂಡಿದೆ.
ಡಾ.ಕೆ.ಕಸ್ತೂರಿರಂಗನ್ ನೇತೃತ್ವದ ಸಮಿತಿಯ ಬಹುತೇಕ ಶಿಫಾರಸುಗಳನ್ನು ಒಪ್ಪಿಕೊಂಡಿದ್ದ ಸಚಿವಾಲಯವು, ಘಟ್ಟ
ಪ್ರದೇಶದಲ್ಲಿ ಅಡಿಕೆ, ಕಾಫಿ, ತೆಂಗು, ಚಹಾ, ರಬ್ಬರ್ ಮತ್ತಿತರ ತೋಟಗಾರಿಕೆ, ಕೃಷಿ ಹಾಗೂ ಕೈಗಾರಿಕಾ ಚಟುವಟಿಕೆಗಳನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು. ಇದಕ್ಕೆ ಕೇರಳ ಹಾಗೂ ಕರ್ನಾಟಕದ ಕೆಲವು ಕಡೆ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು.
ನಿರ್ಬಂಧಕ್ಕೆ ಅಡ್ಡಿ ಇಲ್ಲ: ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ, ಮರಳು ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ ಹಾಗೂ ಮಾಲಿನ್ಯ ಉಂಟುಮಾಡುವ ಉದ್ಯಮ ಸ್ಥಾಪನೆ ಮತ್ತು 20 ಸಾವಿರಕ್ಕಿಂತ ಹೆಚ್ಚು ಚ.ಮೀಟರ್ ಜಾಗದಲ್ಲಿ ಕಟ್ಟಡ ಮತ್ತಿತರ ನಿರ್ಮಾಣ ಯೋಜನೆಗಳು, 50 ಹೆಕ್ಟೇರ್ಗಿಂತ ಹೆಚ್ಚಿನ ಪ್ರದೇಶದಲ್ಲಿ ವಸತಿ ಹಾಗೂ ಅಭಿವೃದ್ಧಿ ಯೋಜನೆ ಕೈಗೊಳ್ಳುವುದಕ್ಕೆ ಈಗಿರುವ ನಿರ್ಬಂಧ ಮುಂದುವರಿಯುತ್ತದೆ.
‘ಸೂಕ್ಷ್ಮ ಪರಿಸರ’ ಪ್ರದೇಶದಲ್ಲಿನ ಜಮೀನು ಬಳಸಿಕೊಳ್ಳುವುದಕ್ಕೆ ಹೊಸದಾಗಿ ನಿರ್ಬಂಧ ಹೇರಿಲ್ಲ. ಅಲ್ಲದೇ ಜನವಸತಿ ಪ್ರದೇಶಕ್ಕೂ ಯಾವುದೇ ಧಕ್ಕೆ ಇಲ್ಲ.