ನವದೆಹಲಿ (ಐಎಎನ್ಎಸ್): ಪಾಕಿಸ್ತಾನವು ಭಯೋತ್ಪಾದನೆಯನ್ನು ತನ್ನ ರಾಷ್ಟ್ರೀಯ ನೀತಿಯ ಸಾಧನವಾಗಿ ಬಳಸುತ್ತಿರುವ ಅಪಾಯವನ್ನು ತಮ್ಮ ದೇಶ ಅರಿತುಕೊಂಡಿದೆ ಎಂದು ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಮಂಗಳವಾರ ಇಲ್ಲಿ ಕಟುಶಬ್ಧಗಳಲ್ಲಿ ಟೀಕಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಅವರೊಡನೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಅವರು, `ದೇಶದ ನಾಗರಿಕರು ಮತ್ತು ನಿರಪರಾಧಿ ಜನರ ವಿರುದ್ಧ ಪಾಕಿಸ್ತಾನವು ಉಗ್ರರನ್ನು ಎತ್ತಿಕಟ್ಟಿ, ದಾಳಿಗೆ ಪ್ರೋತ್ಸಾಹ ನೀಡುತ್ತಿರುವುದನ್ನು ಖಂಡಿಸಿ, ತರಾಟೆಗೆ ತೆಗೆದುಕೊಂಡರು.
ಆಫ್ಘಾನಿಸ್ತಾನದ ಪುನರ್ರಚನೆಯಲ್ಲಿ ಮತ್ತು ದೇಶದ ಯುವಜನರಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ಮಹತ್ವದ ಕೊಡುಗೆ ನೀಡಿದ ಭಾರತವು ತಮ್ಮ ದೇಶದ ಸ್ಥಿರವಾದ ಮಿತ್ರ ರಾಷ್ಟ್ರವಾಗಿದೆ ಎಂದರು.
ಭಾರತ ಕಳವಳ:ಆಫ್ಘಾನಿಸ್ತಾನದಲ್ಲಿ ಉಗ್ರರ ದಾಳಿ ಪುನರಾವರ್ತನೆ ಆಗುತ್ತಿರುವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತವು, ಭಯೋತ್ಪಾದನೆ ವಿರುದ್ಧದ ಜಂಟಿ ಹೋರಾಟವನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ತಂತ್ರಗಾರಿಕೆ ಪಾಲುದಾರಿಕೆಯ ಮಟ್ಟಕ್ಕೆ ಕೊಂಡೊಯ್ಯಲು ಒಪ್ಪಿಗೆ ಸೂಚಿಸಿದೆ. ಎರಡು ದಿನಗಳ ಭಾರತ ಪ್ರವಾಸಕ್ಕಾಗಿ ಇಲ್ಲಿಗೆ ಆಗಮಿಸಿದ ಆಫ್ಘಾನಿಸ್ತಾನ ಅಧ್ಯಕ್ಷ ಹಮೀದ್ ಕರ್ಜೈ ಅವರೊಡನೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಈ ಭರವಸೆ ನೀಡಿದರು.