ನವದೆಹಲಿ (ಪಿಟಿಐ): ಚಾಂಪಿಯನ್ಸ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯನ್ನಾಡಲು ಭಾರತಕ್ಕೆ ಬರಬೇಕೆನ್ನುವ ಪಾಕಿಸ್ತಾನದ ಆಸೆಗೆ ಹಿನ್ನಡೆಯಾಗಿದೆ. ಪಾಕ್ ಆಟಗಾರರಿಗೆ ಭಾರತ ಸರ್ಕಾರ ವೀಸಾ ನಿರಾಕರಿಸಿದ್ದು ಇದಕ್ಕೆ ಕಾರಣ.
ಗಡಿಯಲ್ಲಿ ಪಾಕ್ ಕದನ ವಿರಾಮ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಉಭಯ ದೇಶಗಳ ನಡುವಿನ ಪರಿಸ್ಥಿತಿ ಹದಗೆಟ್ಟಿದೆ. ಸೆಪ್ಟೆಂಬರ್ 17ರಿಂದ ಆರಂಭವಾಗಲಿರುವ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಪಾಕ್ ಆಡಬೇಕಿದೆ.
‘ಪಾಕ್ ಆಟಗಾರರ ಸುರಕ್ಷತೆ ಮತ್ತು ಭದ್ರತೆ ಈಗಿರುವ ಸಮಯದಲ್ಲಿ ಸುಲಭವಲ್ಲ. ಆದ್ದರಿಂದ ಪಾಕ್ ತಂಡಕ್ಕೆ ಸರ್ಕಾರ ಹಸಿರು ನಿಶಾನೆ ತೋರುವುದಿಲ್ಲ’ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ.
ಚಾಂಪಿಯನ್ಸ್ ಲೀಗ್ನಲ್ಲಿ ಆಡಲು ಮಿಸ್ಬಾ ಉಲ್ ಹಕ್ ಸಾರಥ್ಯದ ಫೈಸಲಾಬಾದ್ ತಂಡ ಭಾರತಕ್ಕೆ ಬರಬೇಕಿತ್ತು.