ಕೊಲಂಬೊ: ರೋಚಕ ಪಂದ್ಯದಲ್ಲಿ ಜಯ ಸಾಧಿಸಿದ ಪಾಕಿಸ್ತಾನ ತಂಡವು ತನ್ನ ನಿಜವಾದ ಸಾಮರ್ಥ್ಯ ಮೆರೆದು, ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿಗೆ ತೀವ್ರ ಪೈಪೋಟಿ ಒಡ್ಡುವ ತಂಡವೆಂದು ತೋರಿಸಿದೆ ಎಂದು ಶ್ರೀಲಂಕಾ ನಾಯಕ ಕುಮಾರ ಸಂಗಕ್ಕಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎ ಗುಂಪಿನ ಲೀಗ್ ಪಂದ್ಯದಲ್ಲಿ ಪಾಕ್ ವಿರುದ್ಧ 11 ರನ್ನುಗಳ ಸೋಲು ಅನುಭವಿಸಿದ ನಂತರ ಸುದ್ದಿಸಂಸ್ಥೆಯೊಂದಿಗೆ ಅವರು ಮಾತನಾಡಿದರು.
ಸ್ಪಾಟ್ ಫಿಕ್ಸಿಂಗ್ನಂತಹ ಹಗರಣದ ಬಿಸಿಯನ್ನು ಅನುಭವಿಸಿದ ನಂತರವೂ ಪಾಕ್ ತಂಡ ತನ್ನ ಹೋರಾಟ ಮನೋಭಾವವನ್ನು ಬಿಟ್ಟಿಲ್ಲ. ಪಂದ್ಯದ ಕೊನೆಯ ಎಸೆತದವರೆಗೂ ತೀವ್ರ ಹೋರಾಟ ಒಡ್ಡಿದ ಪಾಕ್ ಗೆಲುವು ಪಡೆಯಿತು. ಶ್ರೀಲಂಕಾ ತಂಡವು ವಿಶ್ವಕಪ್ ಟೂರ್ನಿಗಳಲ್ಲಿ ಪಾಕ್ ವಿರುದ್ಧ ಇದುವರೆಗೂ ಗೆಲುವು ಸಾಧಿಸಿಲ್ಲ. ಈ ಬಾರಿ ಒಂದು ಅವಕಾಶ ಇತ್ತು’ ಎಂದು ಸಂಗಕ್ಕಾರ ಹೇಳಿದರು.
‘ಸಿಕ್ಕ ಕೆಲವು ಉತ್ತಮ ಅವಕಾಶ ಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಆಟಗಾರರು ಸಫಲರಾಗಲಿಲ್ಲ. ಶೋಯಬ್ ಅಖ್ತರ್ಗೆ ಮಹೇಲಾ ಜಯವರ್ಧನೆ, ಶಾಹೀದ್ ಆಫ್ರಿದಿಗೆ ದಿಲ್ಶಾನ್ ತಿಲಕರತ್ನೆ ಔಟಾಗಿದ್ದು ದೊಡ್ಡ ಪೆಟ್ಟಾಯಿತು’ ಎಂದರು. ಶಾಹಿದ್ ಆಫ್ರಿದಿಯ ಏಕದಿನ ಪಂದ್ಯಗಳ 300ನೇ ವಿಕೆಟ್ ಆಗಿ ಸಂಗಕ್ಕಾರ ಈ ಪಂದ್ಯದಲ್ಲಿ ಔಟಾಗಿದ್ದರು.