ಅಮೃತಸರ (ಐಎಎನ್ಎಸ್): ದೀಪಾವಳಿ ಹಬ್ಬದ ಅಂಗವಾಗಿ ಅಟ್ಟಾರಿ-ವಾಘಾ ಗಡಿ ಪ್ರದೇಶದಲ್ಲಿ ಬುಧವಾರ ಭಾರತ ಮತ್ತು ಪಾಕ್ ಸೈನಿಕರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡರು.
ಇಲ್ಲಿಂದ 30 ಕಿ.ಮೀ.ದೂರದಲ್ಲಿರುವ ಗಡಿ ರೇಖೆಯ ಬಳಿ ಭಾರತದ ಗಡಿ ರಕ್ಷಣಾ ಪಡೆಯ (ಬಿಎಸ್ಎಫ್) ಯೋಧರು ಪಾಕಿಸ್ತಾನದ ಸಟ್ಲೆಜ್ ರೇಂಜರ್ಸ್ ಸೇನಾ ತುಕಡಿಯ ಸದಸ್ಯರಿಗೆ ಹಬ್ಬದ ದ್ಯೋತಕವಾಗಿ ಸಿಹಿ ಹಂಚಿದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನಿ ಸೈನಿಕರೂ ಕೂಡಾ ಸಿಹಿ ನೀಡಿದರು.
`ಎರಡೂ ದೇಶಗಳ ಸೈನಿಕರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು~ ಎಂದು ಬಿಎಸ್ಎಫ್ ಸೇನಾ ಮುಖ್ಯಸ್ಥ ಸುಶಿಲ್ ನೇಗಿ ಸುದ್ದಿಗಾರರಿಗೆ ತಿಳಿಸಿದರು.
ಈ ಗಡಿ ಭಾಗವು ಎರಡೂ ದೇಶಗಳ ನಡುವಿನ ಅಧಿಕೃತ ಭೂ ಸಂಚಾರ ಮಾರ್ಗವಾಗಿದೆ. ಇಲ್ಲಿ ಪ್ರತಿನಿತ್ಯ ಸಂಜೆ ನಡೆಯುವ ಉಭಯ ದೇಶಗಳ ವರ್ಣಮಯ ಸೇನಾ ಕವಾಯತು ಪ್ರದರ್ಶನ ಜನಪ್ರಿಯವಾಗಿದೆ.