ಶ್ರೀನಗರ: ಸಾರ್ಕ್ ದೇಶಗಳ ಶೈಕ್ಷಣಿಕ ಕಾರ್ಯಕ್ರಮಗಳ ವಿನಿಮಯ ಯೋಜನೆಯಡಿ ಪಾಕಿಸ್ತಾನದ ಕ್ವಾದಿಅಜಂ ವಿಶ್ವವಿದ್ಯಾಲಯದಲ್ಲಿ ಪಿಎಚ್ಡಿ ಮಾಡಲು ತೆರಳಿರುವ ಕಾಶ್ಮೀರದ ಇಶ್ರತ್ ನವೀದ್ ಅವರು ತಮ್ಮ ಮಾರ್ಗದರ್ಶಿ ಪ್ರಾಧ್ಯಾಪಕರಿಂದಲೇ ತೀವ್ರ ಕಿರುಕುಳಕ್ಕೆ ಒಳಗಾಗಿರುವ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಜೈವಿಕ ತಂತ್ರಜ್ಞಾನದಲ್ಲಿ ಪಿಎಚ್ಡಿ ಪ್ರವೇಶ ಪಡೆದ ನಂತರ ಡಾ. ತಾರಿಕ್ ಮೊಹಮದ್ ಮಾರ್ಗದರ್ಶಕರಾದರು ಎಂದು ತಿಳಿಸಿರುವ ಇಶ್ರತ್, ಈ ಪ್ರಾಧ್ಯಾಪಕರು ಸಂಶೋಧನೆ ಸಂದರ್ಭದಲ್ಲಿ ನೀಡಿದ ಕಿರುಕುಳ ವರ್ಣಿಸಲು ಸಾಧ್ಯವಿಲ್ಲ ಎಂದು ಶ್ರೀನಗರದ ‘ಪ್ರಜಾವಾಣಿ’ ವರದಿಗಾರರಿಗೆ ಕಳುಹಿಸಿರುವ ಇ–ಮೇಲ್ ಸಂದೇಶದಲ್ಲಿ ತಿಳಿಸಿದ್ದಾರೆ
‘ಪ್ರಾಧ್ಯಾಪಕರು ತನ್ನನ್ನು ಭಾರತದ ಗೂಢಚಾರ ಎಂದು ಸಂಶಯದಿಂದ ನೋಡಿದ್ದಲ್ಲದೆ, ತನ್ನೆಲ್ಲಾ ಸಂಶೋಧನಾ ಮಾದರಿಯನ್ನು ಕದ್ದು ತಮ್ಮ ಆಪ್ತ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ’ ಎಂದು ಇಶ್ರತ್ ಆಪಾದಿಸಿದ್ದಾರೆ. ಸಾರ್ಕ್ ವಿನಿಮಯ ಯೋಜನೆಯಂತೆ ಮಂಜೂರಾಗಿರುವ ` 95 ಲಕ್ಷ (ಪಾಕಿಸ್ತಾನ ಕರೆನ್ಸಿ) ಸಂಶೋಧನಾ ಶಿಷ್ಯವೇತನವನ್ನು ಕಬಳಿಸುವ ಉದ್ದೇಶದಿಂದ ಪ್ರಾಧ್ಯಾಪಕ ಡಾ.ತಾರಿಕ್ ಮೊಹಮದ್ ಅವರು ಪಿಎಚ್ಡಿ ಮುಗಿಸಿರುವ ಬಗ್ಗೆ ಪ್ರಮಾಣಪತ್ರ ನೀಡುತ್ತಿಲ್ಲ ಮತ್ತು ಕಾಶ್ಮೀರಕ್ಕೆ ಮರಳಲು ಅನುಮತಿ ನೀಡುತ್ತಿಲ್ಲ ಎಂದು ಇಶ್ರತ್ ದೂರಿದ್ದಾರೆ.
ಈ ಬಗ್ಗೆ ವಿವಿ ಕುಲಪತಿಗಳಿಗೆ ಮತ್ತು ಉನ್ನತ ಶಿಕ್ಷಣ ಆಯೋಗಕ್ಕೆ ದೂರು ನೀಡಿದ್ದರೂ ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ. 2011ರ ಡಿಸೆಂಬರ್ನಲ್ಲಿಯೇ ಪ್ರಬಂಧ ಸಲ್ಲಿಸಿದ್ದರೂ ತನ್ನನ್ನು ಬಿಡುಗಡೆ ಮಾಡಿಲ್ಲ. ಶ್ರೀನಗರದಲ್ಲಿ ಸಹೋದರಿ ಹೃದಯ ಕಾಯಿಲೆಯಿಂದ ನರಳುತ್ತಿದ್ದಾಗ ನೋಡಲು ಬರಲು ಸಾಧ್ಯವಾಗಲಿಲ್ಲ. ಕೊನೆಗೆ ಸಹೋದರಿ ಆಸ್ಪತ್ರೆಯಲ್ಲಿ ತೀರಿಕೊಂಡ ವಿಚಾರ ಗೊತ್ತಾಯಿತು ಎಂದು ಇಶ್ರತ್ ನೋವು ತೋಡಿಕೊಂಡಿದ್ದಾರೆ.
ವಿವಿ ಕುಲಪತಿಯನ್ನು ಇ–ಮೇಲ್ ಮೂಲಕ ಸಂಪರ್ಕಿಸಲು ಯತ್ನಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ. ಪಾಕಿಸ್ತಾನಕ್ಕೆ ಉನ್ನತ ಶಿಕ್ಷಣ ಪಡೆಯಲು ಹೋದ ಇಶ್ರತ್ ಅವರದು ನೋವಿನ ಕಥೆಯಾದರೆ, ಪಾಕ್ನಿಂದ ಕಾಶ್ಮೀರಕ್ಕೆ ಪಿಎಚ್ಡಿ ಮಾಡಲು ಬಂದ ನಾಡಿಯಾ ಮೆಹರದಿನ್ ಅವರು ಈಗ ಖುಷಿಯಿಂದ ಪಾಕ್ಗೆ ಮರಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.